
ಮೂಲ್ಕಿ: ‘ಹಿಂದುತ್ವದ ದೇಶದಲ್ಲಿ ಭಕ್ತಿ-ಭಯದಿಂದ ದೇವರ ಮೇಲಿನ ನಂಬಿಕೆ ಬಲವಾಗಬೇಕು. ಯಕ್ಷಗಾನ ಮೇಳದ ಮೂಲಕ ಪುರಾತನ ಕಥಾನಕಗಳನ್ನು ಜೀವಂತವನ್ನಾಗಿಸಬೇಕು. ಸಾಂಸ್ಕೃತಿಕ ಸೇವೆ ಮೂಲಕ ಭಕ್ತಿಯನ್ನು ಆರಾಧಿಸುವ ಶಕ್ತಿಯ ಉತ್ಥಾನಕ್ಕೆ ಕಟೀಲು ಕ್ಷೇತ್ರ ತೊಡಗಿಸಿಕೊಂಡಿರುವುದು ವಿಶೇಷ . ಕಟೀಲು ಯಕ್ಷಗಾನ ಮೇಳದಿಂದ ಯಕ್ಷಗಾನಕ್ಕೆ ಇರುವ ಸಾಮರ್ಥ್ಯ ಜಗಜ್ಜಾಹಿರಾಗಿದೆ’ ಎಂದು ಕೇಂದ್ರ ಸಚಿವ ಪ್ರಹ್ಮಾದ್ ಜೋಶಿ ಹೇಳಿದರು.
ಬಜಪೆಯ ಮುಖ್ಯ ಪೇಟೆಯಲ್ಲಿ ಕಟೀಲು ಯಕ್ಷಗಾನದ ಏಳು ಮೇಳದ ಭವ್ಯ ಮೆರವಣಿಯನ್ನು ಚಾಲನೆ ನೀಡಿ ಅವರು ಮಾತನಾಡಿದರು.
ಶಾಸಕರಾದ ಉಮಾನಾಥ ಕೋಟ್ಯಾನ್, ಭೋಜೆಗೌಡ, ಪ್ರಮುಖರಾದ ನಳಿನ್ಕುಮಾರ್ ಕಟೀಲು, ಕೃಷ್ಣ ಪಾಲೆಮಾರ್, ಅಭಯಚಂದ್ರ ಜೈನ್, ಮಿಥುನ್ ರೈ, ವಜ್ರದೇಹಿ ರಾಜಶೇಖರನಾಂದ ಸ್ವಾಮೀಜಿ, ಮೋಹನ್ದಾಸ್ ಸ್ವಾಮೀಜಿ, ವಾಸುದೇವ ಆಸ್ರಣ್ಣ, ಲಕ್ಷ್ಮಿನಾರಾಯಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, ಸತೀಶ್ ಕುಂಪಲ, ಶ್ಯಾಮ್ ಭಟ್, ಸನತ್ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು, ರಾಘವೇಂದ್ರ ಆಚಾರ್ಯ, ಮೇಳದ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಮತ್ತಿತರರು ಇದ್ದರು.
ಏಳೂ ಮೇಳದ ಎಲ್ಲಾ ಪರಿಕರಗಳನ್ನು ಆಕರ್ಷಕವಾಗಿ ಜೋಡಿಸಿಟ್ಟ ದೇವರ ಮಂಟಪದ ರಥಕ್ಕೆ ವಿಶೇಷವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಚಾಲನೆ ನೀಡಿದರು.
ಬಜಪೆಯಿಂದ ಕಟೀಲಿನವರೆಗೆ ಭವ್ಯ ಮೆರವಣಿಗೆಯಲ್ಲಿ ದಾರಿಯುದ್ಧಕ್ಕೂ ವಿವಿಧ ಸಂಘ ಸಂಸ್ಥೆಗಳು ಪಾನೀಯ ವ್ಯವಸ್ಥೆ ಹಾಗೂ ಕಲ್ಲಂಗಡಿ ಹಣ್ಣನ್ನು ಹಂಚಲಾಯಿತು. ಸುಮಾರು 150ಕ್ಕೂ ಹೆಚ್ಚು ಭಜನಾ ಸಂಕೀರ್ತನಕಾರರು ಭಜನೆಯ ಮೂಲಕ ಹಾಗೂ ಆಕರ್ಷಕ ವೇಷ ಭೂಷಣಗಳು, ವಾದ್ಯ ಬ್ಯಾಂಡ್ಗಳು ಜನಾಕರ್ಷಣೆ ಪಡೆಯಿತು. ಎಕ್ಕಾರು ಕೊಡಮಣಿತ್ತಾಯ ದೈವಸ್ಥಾನದ ಮುಂಭಾಗದಿಂದ ಪಾದಾಯಾತ್ರೆಯ ಮೂಲಕ ಕಟೀಲು ಕ್ಷೇತ್ರಕ್ಕೆ ತೆರಳಲಾಯಿತು. ದೇವಳದಲ್ಲಿ ವಿಶೇಷ ಪೂಜೆಯನ್ನು ನಡೆಸಿ ಪ್ರಾರ್ಥಿಸಲಾಯಿತು. ಭಾನುವಾರ ಏಳೂ ಮೇಳಕ್ಕೆ ಚಾಲನೆ ನೀಡುವ ಕಾರ್ಯಕ್ರಮ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.