ಮಂಗಳೂರು: ನಗರದ ಕಂಕನಾಡಿ ಬೆಂದೂರ್ ವೆಲ್ನ 'ಹೋಟೆಲ್ ರೆಸಿಡೆನ್ಸಿ' ವಸತಿಗೃಹದಲ್ಲಿ ಬುಧವಾರ ಮಧ್ಯರಾತ್ರಿ ಸಂಭವಿಸಿದ ಬೆಂಕಿ ದುರಂತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
'ನಗರದ ಬಿಕರ್ನಕಟ್ಟೆಯ ಯಶರಾಜ್ ಸುವರ್ಣ (43) ಮೃತರು ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಅವರು ನ. 15ರಿಂದ ಈ ಕೊಠಡಿಯನ್ನು ಬಾಡಿಗೆಗೆ ಪಡೆದು ಅಲ್ಲೇ ಉಳಿದುಕೊಂಡಿದ್ದರು ಎಂದು ಹೋಟೆಲ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ' ಎಂಬುದಾಗಿ ಅಗ್ನಿಶಾಮಕ ದಳದ ಮೂಲಗಳು ತಿಳಿಸಿವೆ.
'ಕಂಕನಾಡಿ ಬೆಂದೂರ್ ವೆಲ್ ನ ವಸತಿಗೃಹವೊಂದರ ಎರಡನೇ ಮಹಡಿಯಲ್ಲಿದ್ದ ಕೊಠಡಿಗೆ ಬೆಂಕಿ ಹೊತ್ತಿರುವ ಬಗ್ಗೆ ಬುಧವಾರ ರಾತ್ರಿ. 12.35 ರ ವೇಳೆಗೆ ಮಾಹಿತಿ ಬಂದಿತ್ತು. ನಮ್ಮ ಸಿಬ್ಬಂದಿ ಸ್ಥಳಕ್ಕೆ ತಲುಪಿ, ಬೆಂಕಿ ನಂದಿಸಿದರು. ಬೆಂಕಿಯಿಂದ ಭಾಗಶಃ ಸುಟ್ಟುಹೋಗಿದ್ದ ವ್ಯಕ್ತಿಯೊಬ್ಬರನ್ನು ರಕ್ಷಿಸುವ ಪ್ರಯತ್ನ ಮಾಡಿದೆವು. ಆದರೆ, ಅವರನ್ನು ಉಳಿಸಿಕೊಳ್ಳಕು ಸಾಧ್ಯವಾಗಲಿಲ್ಲ. ಅವರ ದೇಹ ಭಾಗಶಃ ಸುಟ್ಟು ಹೋಗಿತ್ತು. ಅವರು ಸ್ಥಳದಲ್ಲೇ ಮೃತಪಟ್ಟಿದ್ದರು' ಎಂದು ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ರಂಗನಾಥ್ 'ಪ್ರಜಾವಾಣಿ’ಗೆ ತಿಳಿಸಿದರು.
'ಕೊಠಡಿಯಲ್ಲಿದ್ದ ಹಾಸಿಗೆ, ಎ.ಸಿ, ಎಲೆಕ್ಟ್ರಿಕ್ ಮತ್ತಿತರ ಪರಿಕರಗಳು ಸುಟ್ಟುಹೋಗಿವೆ. ಬೆಂಕಿಯನ್ನು ನಂದಿಸುವ ಮೂಲಕ ಹೆಚ್ಚಿನ ದುರಂತ ಸಂಭವಿಸದಂತೆ ಅಗ್ನಿಶಾಮಕ ಸಿಬ್ಬಂದಿ ತಡೆದಿದ್ದಾರೆ. ಬೆಂಕಿ ಹೊತ್ತಿಕೊಳ್ಳುವುದಕ್ಕೆ ನಿಜವಾದ ಕಾರಣ ಏನೆಂದು ಇನ್ನಷ್ಟೇ ಗೊತ್ತಾಗಬೇಕಿದೆ.' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.