ಮಂಗಳೂರು: ನಗರದ ಕದ್ರಿ ಉದ್ಯಾನ್ಯದಲ್ಲಿ ಪುಷ್ಪಗಳಿಂದ ಮೈದಳೆದಿರುವ ಐಫೆಲ್ ಟವರ್, ಯಕ್ಷಗಾನ ಕಲಾಕೃತಿಗಳು, ಆಲಂಕಾರಿಕ ಎಲೆಗಳಲ್ಲಿ ಮೂಡಿದ ಕಂಬಳದ ಕೋಣಗಳು ಹೃನ್ಮನ ತಣಿಸುತ್ತಿವೆ.
ಗುರುವಾರದಿಂದ ನಾಲ್ಕು ದಿನಗಳ ಕಾಲ ನಡೆಯಲಿರುವ ಫಲಪುಷ್ಪ ಪ್ರದರ್ಶನಕ್ಕೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಚಾಲನೆ ನೀಡಿದರು. 22 ಅಡಿ ಎತ್ತರದ ಐಫೆಲ್ ಟವರ್ ಅನ್ನು ಸುಮಾರು 2 ಲಕ್ಷ ಬಿಳಿ ಹಾಗೂ ಕೆಂಪು ಹೂಗಳಿಂದ ನಿರ್ಮಿಸಲಾಗಿದೆ.
ಪುಷ್ಪಗಳ ಜೋಡಣೆ, ತರಕಾರಿ ಕೆತ್ತನೆ, ಸೆಲ್ಫಿ ಝೋನ್, ಕೆನನ್ ಬಾಲ್, ಹೂಗಳಲ್ಲಿ ಅರಳಿದ ಜೇನ್ನೊಣ, ಮಿಕ್ಕಿ ಮೌಸ್ ಕಲಾಕೃತಿಗಳು ಕಣ್ಸೆಳೆಯುತ್ತಿವೆ.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮೇಯರ್ ಮನೋಜ್ಕುಮಾರ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಆನಂದ್ ಕೆ., ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಮಂಜುನಾಥ ಡಿ. ಭಾಗವಹಿಸಿದ್ದರು.
ಆಕ್ಷೇಪ: ಫಲಪುಷ್ಪ ಪ್ರದರ್ಶನಕ್ಕೆ ವಯಸ್ಕರಿಗೆ ₹30, ಮಕ್ಕಳಿಗೆ ₹20 ಟಿಕೆಟ್ ದರ ನಿಗದಿಪಡಿಸಲಾಗಿದೆ. ಪ್ರದರ್ಶನ ವೀಕ್ಷಣೆಗೆ ಬಂದಿದ್ದ ಹಲವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ‘ಪುಷ್ಪಕೃಷಿ ಪ್ರೇರಣೆಯ ಉದ್ದೇಶದೊಂದಿಗೆ ನಡೆಯುವ ಇಂತಹ ಪ್ರದರ್ಶನಗಳ ವೀಕ್ಷಣೆ ಸಾರ್ವಜನಿಕರಿಗೆ ಮುಕ್ತವಾಗಿರಬೇಕು. ಟಿಕೆಟ್ ದರ ಸಾಮಾನ್ಯರಿಗೆ ಹೊರೆಯಾಗುತ್ತದೆ’ ಎಂದು ವೀಕ್ಷಣೆ ಬಂದವರೊಬ್ಬರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.