ಮಂಗಳೂರು: ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯಿಂದ ರೋಹಿತ್ ಚಕ್ರತೀರ್ಥ ಅವರನ್ನು ತೆಗೆದು ಶಿಕ್ಷಣ ತಜ್ಞರನ್ನು ಒಳಗೊಂಡ ಹೊಸ ಸಮಿತಿ ರಚಿಸಬೇಕು ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಕುಮಾರ್ ಆಗ್ರಹಿಸಿದರು.
ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರೋಹಿತ್ ಚಕ್ರತೀರ್ಥ ಸಮಿತಿ ಅಧ್ಯಕ್ಷರಾಗಿರುವುದನ್ನು ಎಲ್ಲರೂ ವಿರೋಧಿಸುತ್ತಿರುವಾಗ ಸರ್ಕಾರ ಯಾಕೆ ಮೊಂಡುವಾದ ಮಾಡುತ್ತಿದೆ ಎಂದು ತಿಳಿಯುತ್ತಿಲ್ಲ. ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿ ಸರ್ಕಾರ ಗೊಂದಲ ಸೃಷ್ಟಿಸುತ್ತಿದೆ. ವೆಬ್ಸೈಟ್ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಷಯ ಕೈಬಿಟ್ಟಿರುವುದು ಬಹಿರಂಗವಾದಾಗ, ಶಿಕ್ಷಣ ಸಚಿವರು ಕೈ ಬಿಟ್ಟಿಲ್ಲ ಎಂದಿದ್ದರು. ಈಗ ಕನ್ನಡ ಪಠ್ಯದಲ್ಲಿ ಸೇರಿಸುವುದಾಗಿ ಹೇಳಿದ್ದಾರೆ. ಪಠ್ಯದಿಂದ ತೆಗೆದಿಲ್ಲ ಎಂದಾದಲ್ಲಿ, ಮತ್ತೆ ಸೇರಿಸುವುದು ಯಾಕೆ’ ಎಂದು ಪ್ರಶ್ನಿಸಿದರು.
‘ಪಠ್ಯಪುಸ್ತಕದಲ್ಲಿ ಭಗತ್ ಸಿಂಗ್, ನಾರಾಯಣ ಗುರು ಪಾಠ ಕೈ ಬಿಟ್ಟಿದ್ದರು. ವಿರೋಧ ವ್ಯಕ್ತವಾಗುತ್ತಲೇ ಪಠ್ಯವನ್ನು ಕನ್ನಡ ಪುಸ್ತಕದಲ್ಲಿ ಪ್ರಕಟಿಸಿದ್ದಾರೆ. ಸಮಾಜ ವಿಜ್ಞಾನದಿಂದ ಪಠ್ಯ ತೆಗೆದಿದ್ದು ಸತ್ಯ ಎಂದು ಶಿಕ್ಷಣ ಸಚಿವರು ಒಪ್ಪಿಕೊಳ್ಳಲಿ. ನಾರಾಯಣ ಗುರುಗಳ ಅನುಯಾಯಿಗಳು ಎಂದು ಹೇಳುವು ಸಚಿವರು ಕೂಡ ಇದನ್ನು ಸಮರ್ಥಿಸುತ್ತಾರೆ’ ಎಂದರು.
ಮಳಲಿ ಮಸೀದಿಯಲ್ಲಿ ದೇವಸ್ಥಾನದ ರಚನೆ ಕಂಡುಬಂದ ಸಂಬಂಧ ವಿಶ್ವಹಿಂದೂ ಪರಿಷತ್ ತಾಂಬೂಲ ಪ್ರಶ್ನೆ ನಡೆಸಿದೆ. ಈ ವಿಷಯ ಕೋರ್ಟ್ನಲ್ಲಿದೆ. ವಿನಾಕಾರಣ ಶಿಕ್ಷಣ, ಜಾತಿ, ಧರ್ಮ ಎಲ್ಲದರಲ್ಲೂ ರಾಜಕಾರಣ ಕಾಣುವಂತಾಗಿದೆ. ಧರ್ಮ, ಜಾತಿ ಮೂಲಕ ಮನಸ್ಸನ್ನು ವಿಭಜಿಸುವುದು ಅಪಾಯಕಾರಿಯಾಗಿದೆ. ಈ ದೇಶದ ಪರಂಪರೆ ಧರ್ಮ ಸಮನ್ವಯದ ಮೇಲೆ ನಿಂತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮುಖಂಡರಾದ ಸದಾಶಿವ ಉಳ್ಳಾಲ್, ವಿಶ್ವಾಸ್ ಕುಮಾರ್ ದಾಸ್, ಶುಭೋದಯ ಆಳ್ವ, ಸಿ.ಎಂ. ಮುಸ್ತಫಾ, ಅಬ್ದುಲ್ ಸಲೀಂ ಪಾಂಡೇಶ್ವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.