ಮಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯಡಿ ₹ 6.4 ಕೋಟಿ ವೆಚ್ಚದಲ್ಲಿ ನಗರದಲ್ಲಿ ನಿರ್ಮಾಣಗೊಳ್ಳಲಿರುವ ಸೈಕಲ್ ಟ್ರ್ಯಾಕ್ಗೆ ಸಂಸದ ನಳಿನ್ಕುಮಾರ್ ಕಟೀಲ್ ಅವರು ಮಾರ್ನಮಿಕಟ್ಟೆಯಲ್ಲಿ ಸೋಮವಾರ ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಮಂಗಳೂರಿನಲ್ಲಿ ಸೈಕಲಿಂಗ್ ಆಸಕ್ತರು ಹೆಚ್ಚುತ್ತಿದ್ದಾರೆ. ಈ ಕಾರಣ ಜನರ ಬೇಡಿಕೆಯಂತೆ ಪ್ರತ್ಯೇಕ ಸೈಕಲ್ ಪಥ ನಿರ್ಮಿಸಲಾಗುವುದು. 12 ಕಿ.ಮೀ. ಉದ್ದದ ಈ ಮಾರ್ಗವು ಶಾಸಕ ಡಿ. ವೇದವ್ಯಾಸ ಕಾಮತ್ ಮುತುವರ್ಜಿಯಲ್ಲಿ ನಿರ್ಮಾಣಗೊಳ್ಳುತ್ತಿದೆ’ ಎಂದರು.
ಸೈಕಲ್ ಪಥ ಮಂಗಳೂರಿಗೆ ಹೊಸ ಯೋಜನೆ ಮತ್ತು ಪರಿಕಲ್ಪನೆಯಾಗಿದೆ. ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಂಡು ಜನರ ಬಳಕೆಗೆ ಲಭ್ಯವಾಗಬೇಕು ಎಂದರು.
ಉದ್ದೇಶಿತ ಸೈಕಲ್ ಪಥವು ಶೇ 30ರಷ್ಟು ಶಿಕ್ಷಣ ಸಂಸ್ಥೆಗಳ ಮೂಲಕ ಹಾದುಹೋಗುತ್ತದೆ. ಬೋಳಾರದಿಂದ ಪ್ರಾರಂಭವಾಗುವ ಸೈಕಲ್ ಪಥವು ವೆಲೆನ್ಸಿಯಾ ಮತ್ತು ಮಾರ್ನಮಿಕಟ್ಟೆ ಮೂಲಕ ಕೊಡಿಯಾಲ್ಬೈಲ್ನ ಟಿಎಂಎ ಪೈ ಸಭಾಂಗಣ ಬಳಿ ಕೊನೆಗೊಳ್ಳಲಿದೆ. ಮಂಗಳೂರಿನ ಬೈಸಿಕಲ್ ಕ್ಲಬ್ಗಳ ಒತ್ತಾಸೆಯಂತೆ ಮೊದಲ ಹಂತದಲ್ಲಿ ಈ ಯೋಜನೆ ಸಾಕಾರಗೊಳ್ಳುತ್ತಿದೆ. 2030ರ ವೇಳೆಗೆ ಮಂಗಳೂರನ್ನು ಸೈಕಲ್ಸ್ನೇಹಿ ನಗರವನ್ನಾಗಿ ರೂಪಿಸಲು
ಪ್ರಯತ್ನಿಸಲಾಗುತ್ತಿದೆ ಎಂದು ಶಾಸಕ ಡಿ. ವೇದವ್ಯಾಸ ಕಾಮತ್ ತಿಳಿಸಿದರು.
ಮೇಯರ್ ಪ್ರೇಮಾನಂದ ಶೆಟ್ಟಿ, ಮುಡಾ ಅಧ್ಯಕ್ಷ ರವಿಶಂಕರ ಮಿಜಾರು, ಮಹಾನಗರ ಪಾಲಿಕೆಯ ಸಚೇತಕ ಸುಧೀರ್ ಶೆಟ್ಟಿ ಕಣ್ಣೂರು ಇದ್ದರು.
***
26 ಶಿಕ್ಷಣ ಸಂಸ್ಥೆಗಳು, 20 ಸಾರ್ವಜನಿಕ ಕಟ್ಟಡ ಸನಿಹದಿಂದ ಸೈಕಲ್ ಪಥ ನಿರ್ಮಾಣಗೊಳ್ಳುತ್ತದೆ. ಮಕ್ಕಳು ಮತ್ತು ವೃದ್ಧರಿಗೆ ಇದು ಅನುಕೂಲವಾಗಲಿದೆ.
- ನಳಿನ್ಕುಮಾರ್ ಕಟೀಲ್, ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.