ADVERTISEMENT

ಮಂಗಳೂರು ಬ್ಯಾರಿ ಭವನಕ್ಕೆ ₹6 ಕೋಟಿ

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2019, 10:10 IST
Last Updated 10 ಡಿಸೆಂಬರ್ 2019, 10:10 IST
ರಹೀಂ ಉಚ್ಚಿಲ್
ರಹೀಂ ಉಚ್ಚಿಲ್   

ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ನೂತನ ಭವನ ನಿರ್ಮಾಣಕ್ಕೆ ರಾಜ್ಯ ಸರ್ಕಾರ ₹6 ಕೋಟಿ ಮಂಜೂರು ಮಾಡಿದೆ.

ಅಕಾಡೆಮಿಯ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ರಹೀಂ ಉಚ್ಚಿಲ್‌, ‘ನಗರದ ನೀರುಮಾರ್ಗದಲ್ಲಿ 25 ಸೆಂಟ್ಸ್ ಜಮೀನಿನಲ್ಲಿ ಬ್ಯಾರಿ ಭವನ ನಿರ್ಮಾಣಗೊಳ್ಳಲಿದೆ. ಶೀಘ್ರವೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಿಲಾನ್ಯಾಸ ನೆರವೇರಿಸಲಿದ್ದಾರೆ’ ಎಂದರು.

‘ಬ್ಯಾರಿ ಭವನಕ್ಕೆ ₹8 ಕೋಟಿ ಪ್ರಸ್ತಾವ ಸಲ್ಲಿಸಲಾಗಿತ್ತು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರದಿಂದ ₹6 ಕೋಟಿ ಮಂಜೂರಾಗಿದ್ದು, ಈ ಪೈಕಿ ₹3 ಕೋಟಿ ಬಿಡುಗಡೆ ಆಗಿದೆ’ ಎಂದರು.

ADVERTISEMENT

‘ಬ್ಯಾರಿ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹಿಂದಿನ ಸರ್ಕಾರಗಳು ಸ್ಪಂದಿಸಿರಲಿಲ್ಲ. ಆದರೆ, ನಾವು ಈಚೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದು, ತ್ವರಿತವಾಗಿ ಸ್ಪಂದಿಸಿದ್ದಾರೆ. ಸಂಸದ ನಳಿನ್‌ ಕುಮಾರ್ ಕಟೀಲ್ ಹಾಗೂ ಶಾಸಕರು ಬೆಂಬಲಿಸಿದ್ದಾರೆ’ ಎಂದರು.

‘ಸುಸಜ್ಜಿತ ಭವನದಲ್ಲಿ ಅಧ್ಯಕ್ಷರು, ರಿಜಿಸ್ಟ್ರಾರ್ ಹಾಗೂ ಸಿಬ್ಬಂದಿ ಕಚೇರಿಗಳು, ಸಭಾಭವನ, ಗ್ರಂಥಾಲಯ ಸೇರಿದಂತೆ ಬ್ಯಾರಿ ಕಲೆ, ಸಾಹಿತ್ಯ, ಪರಂಪರೆಯ ಅನಾವರಣ ಮಾಡಲಾಗುವುದು. ಬ್ಯಾರಿ ಆಂದೋಲನದಲ್ಲಿ ಕೊಡುಗೆ ನೀಡಿದ ಎಲ್ಲ ಹಿರಿಯರ ಮಾರ್ಗದರ್ಶನ ಪಡೆಯಲಾಗುವುದು’ ಎಂದರು.

‘2020-21ನೆ ಶೈಕ್ಷಣಿಕ ವರ್ಷದಲ್ಲಿ ತೃತೀಯ ಭಾಷೆಯಾಗಿ ಬ್ಯಾರಿ ಪಠ್ಯವನ್ನು 6ನೇ ತರಗತಿಗೆ ಪರಿಚಯಿಸಲಾಗುವುದು. 2020ರೊಳಗೆ ವಿಶ್ವ ಬ್ಯಾರಿ ಸಮ್ಮೇಳನ ನಡೆಸುವ ಉದ್ದೇಶ ಇದೆ’ ಎಂದರು.

ರಿಜಿಸ್ಟ್ರಾರ್ ಪೂರ್ಣಿಮಾ, ಸದಸ್ಯರಾದ ಮುರಳಿರಾಜ್, ಚಂಚಲಾಕ್ಷಿ, ಸುರೇಖಾ, ರೂಪೇಶ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.