ಮಂಗಳೂರು: ‘ಕೇಂದ್ರ ಸರ್ಕಾರವು ಜಿಎಸ್ಟಿ ದರ ಇಳಿಕೆ ಮಾಡಿರುವುದು ದೇಶೀಯ ಮಾರುಕಟ್ಟೆ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ. ಆರ್ಥಿಕತೆ ಬಲಿಷ್ಠಗೊಳ್ಳಲು ಕೈಗೊಂಡಿರುವ ಈ ಕ್ರಮದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ನಾಗರಿಕರ ಜೊತೆ ಸಂವಾದ ನಡೆಸಲಾಗುವುದು’ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.
ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಆರ್ಥಿಕ ಪ್ರಕೋಷ್ಠದ ನೇತೃತ್ವದಲ್ಲಿ ಅ.20ರವರೆಗೆ ವಿವಿಧೆಡೆ ಕಾರ್ಯಕ್ರಮ ನಡೆಯಲಿದೆ. 2047ಕ್ಕೆ ವಿಕಸಿತ ಭಾರತ ನಿರ್ಮಾಣ ಪ್ರಧಾನಿ ನರೇಂದ್ರ ಮೋದಿ ಅವರ ಗುರಿಯಾಗಿದ್ದು, ಆತ್ಮ ನಿರ್ಭರತೆಯೆಡೆಗೆ ಭಾರತ ಹೆಜ್ಜೆ ಹಾಕುತ್ತಿದೆ. ಅದರ ಭಾಗವಾಗಿ ಜಿಎಸ್ಟಿ 2.0 ಜಾರಿಗೊಂಡಿದೆ. ಉಳಿತಾಯ ಉತ್ಸವ ಆಚರಿಸಲಾಗುತ್ತಿದೆ. ಜಿಎಸ್ಟಿ ಇಳಿಕೆ ಪರಿಣಾಮ ಈಗಾಗಲೇ ಮಾರುಕಟ್ಟೆಯಲ್ಲಿ ಕಾಣುತ್ತಿದ್ದು, ಜನರ ಖರೀದಿಸುವ ಶಕ್ತಿ ಹೆಚ್ಚಾಗಿದೆ ಎಂದರು.
ಬಿಜೆಪಿ ಆರ್ಥಿಕ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಶಾಂತಾರಾಮ ಶೆಟ್ಟಿ ಮಾತನಾಡಿ, ಜಿಎಸ್ಟಿ ಇಳಿಕೆಯ ಲಾಭವನ್ನು ಈಗಾಗಲೇ ಆರ್ಥಿಕ ವಲಯದಲ್ಲಿ ಕಾಣುತ್ತಿದ್ದೇವೆ. ಅನೇಕ ವಸ್ತುಗಳ ಬೆಲೆ ಇಳಿಕೆಯಾಗಿದೆ. ಎಂದರು.
ಪ್ರೇಮಾನಂದ ಶೆಟ್ಟಿ, ಪೂರ್ಣಿಮಾ, ಪ್ರಸನ್ನ ದರ್ಬೆ, ಸಂಜಯ ಪ್ರಭು, ವಸಂತ ಪೂಜಾರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.