ADVERTISEMENT

ಸಮುದಾಯದ ಸೇವೆಗೆ ಒತ್ತು

ಹಿದಾಯ ಫೌಂಡೇಷನ್ ಗ್ಲೋಬಲ್ ಮೀಟ್-2025

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 5:40 IST
Last Updated 24 ಜುಲೈ 2025, 5:40 IST
ಮಂಗಳೂರಿನಲ್ಲಿ ಹಿದಾಯ ಫೌಂಡೇಷನ್ ಗ್ಲೋಬಲ್ ಮೀಟ್ ಸಮಾರಂಭದಲ್ಲಿ ಯೋಜನಾ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು
ಮಂಗಳೂರಿನಲ್ಲಿ ಹಿದಾಯ ಫೌಂಡೇಷನ್ ಗ್ಲೋಬಲ್ ಮೀಟ್ ಸಮಾರಂಭದಲ್ಲಿ ಯೋಜನಾ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು   

ಮಂಗಳೂರು: ಸಮುದಾಯದ ಶಿಕ್ಷಣ, ಆರೋಗ್ಯ ಒಳಗೊಂಡಂತೆ ಕೌನ್ಸಿಲಿಂಗ್ ಸೆಂಟರ್, ಕೌಶಲ ತರಬೇತಿ ಮೊದಲಾದ ಯೋಜನೆಗಳಿಗಾಗಿ ಮಂಗಳೂರು ಹೃದಯ ಭಾಗದಲ್ಲಿ ನಿರ್ಮಾಣವಾಗುತ್ತಿರುವ ಕಮ್ಯುನಿಟಿ ಸೆಂಟರ್ (ಇಪಿಸೆಂಟರ್) ಕಾಮಗಾರಿ ಪ್ರಗತಿಯಲ್ಲಿದೆ. ಮೊದಲ ಹಂತದ ಕಾಮಗಾರಿ ಡಿಸೆಂಬರ್‌ಗೆ ಪೂರ್ಣಗೊಂಡು ಲೋಕಾರ್ಪಣೆ ಆಗಲಿದೆ ಎಂದು ಹಿದಾಯ ಫೌಂಡೇಷನ್ ಟ್ರಸ್ಟ್ ಚೇರ್ಮನ್ ಝಕರಿಯಾ ಬಜ್ಪೆ ಹೇಳಿದರು.

ಹಿದಾಯ ಫೌಂಡೇಷನ್ ಕೇಂದ್ರ ಕಚೇರಿಯಲ್ಲಿ ನಡೆದ ಹಿದಾಯ ಫೌಂಡೇಷನ್ ಗ್ಲೋಬಲ್ ಮೀಟ್ ಸಮಾರಂಭದಲ್ಲಿ ಮಾತನಾಡಿದ ಅವರು,  ಕಮ್ಯುನಿಟಿ ಸೆಂಟರ್ ಒಟ್ಟು ₹30 ಕೋಟಿ ಮೊತ್ತದ ಯೋಜನೆಯಾಗಿದ್ದು, ಅನಿವಾಸಿ ಭಾರತೀಯ ಸಮಿತಿ ಮತ್ತು ಕೇಂದ್ರ ಸಮಿತಿಯವರ ಅವಿರತ ಶ್ರಮದಿಂದಾಗಿ ಮೊದಲ ಹಂತದ ಮೊದಲನೇ ಮಹಡಿ ಕಾಮಗಾರಿ ಕೊನೆ ಹಂತದಲ್ಲಿದೆ. ಮುಂದಿನ ಹಂತದ ಅಭಿವೃದ್ಧಿ ಕೆಲಸಗಳಿಗೆ ನಾವೆಲ್ಲರೂ ಸಹಭಾಗಿಗಳಾಗಬೇಕು ಎಂದರು.

ಬಂದರು ಮಸೀದಿಯ ಖತೀಬ್ ಸುಹೈಬ್ ಹುಸೈನ್ ಮೌಲಾನಾ ಮಾತನಾಡಿ, 18 ವರ್ಷಗಳಿಂದ ನಿಸ್ವಾರ್ಥವಾಗಿ ಬಡವರ, ಅಸಹಾಯಕರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇದರ ಕಾರ್ಯಕರ್ತರು ನಿಜವಾದ ಸೇವಾಕರ್ತರು ಎಂದರು.

ADVERTISEMENT

ಹಿದಾಯ ಫೌಂಡೇಷನ್ ಅಧ್ಯಕ್ಷ ಹನೀಫ್ ಹಾಜಿ ಮಾತನಾಡಿ ಸಂಸ್ಥೆಯ ವತಿಯಿಂದ ಕಾವಲ್ಕಟ್ಟೆಯಲ್ಲಿರುವ ಹಿದಾಯ ಶೇರ್ ಮತ್ತು ಕೇರ್ ಕಾಲೊನಿಯಲ್ಲಿ 47 ಮನೆಗಳನ್ನು ನಿರ್ಮಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ವಾಸಿಸುತ್ತಿದ್ದು, ಇವರುಗಳ ಆಹಾರ, ಇಲ್ಲಿನ 60 ಮಕ್ಕಳ ಶಿಕ್ಷಣ ವ್ಯವಸ್ಥೆಯನ್ನು ಸಂಸ್ಥೆ ನೋಡಿಕೊಳ್ಳುತ್ತಿದೆ. ಅದಾಗ್ಯೂ ಜಿಲ್ಲೆಯಿಂದ ಆಯ್ದ 48 ಕುಟುಂಬಗಳಿಗೆ ಪಡಿತರ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಯೆನ್ ಕಾರ್ಡ್‌ ಮೂಲಕ 1100 ರೋಗಿಗಳಿಗೆ ₹10.35 ಲಕ್ಷ ಮೊತ್ತವನ್ನು ಸಂಸ್ಥೆ ಭರಿಸಿದೆ ಎಂದು ತಿಳಿಸಿದರು.

ಸಂಸ್ಥೆಯ ಸ್ಥಾಪಕಾಧ್ಯಕ್ಷ ಕಾಸಿಂ ಅಹಮದ್, ಕಾರ್ಯದರ್ಶಿ ಅಬ್ಬಾಸ್ ಉಚ್ಚಿಲ್, ವೆಲ್ನೆಸ್ನ ಝಿಯಾದ್, ಯುವ ಘಟಕದ ಇಬ್ರಾಹಿಂ ಖಲೀಲ್, ಮಹಿಳಾ ಘಟಕದ ನೌಶೀನ, ಆಡಳಿತಾಧಿಕಾರಿ ಆಬಿದ್ ಅಸ್ಘರ್, ಡಾ. ಹಬೀಬ್ ರಹಿಮಾನ್ ಮಾತನಾಡಿದರು.

ಅನಿವಾಸಿ ಭಾರತೀಯರ ರಿಯಾದ್ ಘಟಕದ ಮಹಮ್ಮದ್ ಮತೀಮ್, ದಮ್ಮಾಮ್ ಘಟಕದ ಬಾವಾ ಸಾಬ್, ಅಝೀಜ್, ಜೆದ್ದಾ ಘಟಕದ ಹಮೀದ್, ಜುಬೈಲ್ ಘಟಕದ ಫಾರೂಕ್, ದುಬಾಯಿ ಘಟಕದ ಮಹಮ್ಮದ್ ಆಶಿಫ್ ತಮ್ಮ ಘಟಕಗಳ ಕಾರ್ಯಚಟುವಟಿಕೆಗಳ ಮಾಹಿತಿ ನೀಡಿದರು.

ಸಂಸ್ಥೆಯ ಪದಾಧಿಕಾರಿಗಳಾದ ರಿಯಾಝ್ ಬಾವಾ, ಎಫ್.ಎಂ. ಬಶೀರ್, ಮಕ್ಬೂಲ್ ಅಹಮದ್, ಆಶಿಫ್ ಇಕ್ಬಾಲ್, ಅಬ್ದುಲ್ ಹಕೀಂ, ಶುಕೂರ್ ಹಾಜಿ ಕಲ್ಲೇಗ, ಇಸ್ಮಾಯಿಲ್ ನೆಲ್ಯಾಡಿ, ಇದ್ದಿನ್ ಕುಂಞ್, ಶೇಖ್ ಇಸಾಕ್ ಪಾಲ್ಗೊಂಡಿದ್ದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಜಾಕ್ ಸ್ವಾಗತಿಸಿದರು. ಆಶಿಕ್ ಕುಕ್ಕಾಜೆ ವಂದಿಸಿದರು. ಮಹಮ್ಮದ್ ತುಂಬೆ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.