ADVERTISEMENT

ತೆಂಕ ಎಕ್ಕಾರು: ಕುಡಿದ ಮತ್ತಿನಲ್ಲಿ ಪತ್ನಿಯ ಕೊಲೆ

ತಂದೆ– ತಾಯಿ ಜಗಳದಲ್ಲಿ ಅನಾಥವಾದ ಬಾಲಕ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2022, 5:59 IST
Last Updated 29 ನವೆಂಬರ್ 2022, 5:59 IST
   

ಮಂಗಳೂರು: ತೆಂಕ ಎಕ್ಕಾರು ಗ್ರಾಮದ ಪಲ್ಲದಕೋಡಿಯಲ್ಲಿ ವಾಸವಿದ್ದ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಪತ್ನಿಯನ್ನೇ ಕೊಲೆ ಮಾಡಿದ್ದಾನೆ.

ತೆಂಕ ಎಕ್ಕಾರು ಗ್ರಾಮದ ಸರಿತಾ (35) ಮೃತ ಮಹಿಳೆ. ಆರೋಪಿಯನ್ನು ದುರ್ಗೇಶ್ ಎಂದು ಗುರುತಿಸಲಾಗಿದೆ. ಆತನನ್ನು ಪೊಲೀಸರು ಬಂಧಿಸಿದ್ದಾರೆ.

‘ಕುಡಿದ ಮತ್ತಿನಲ್ಲಿದ್ದ ದುರ್ಗೇಶ್‌ ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಹೆಂಡತಿ ಸರಿತಾ ಜೊತೆ ಜಗಳವಾಡಿದ್ದ. ಸ್ಥಳದಲ್ಲಿದ್ದ ಮರದ ರೀಪಿನಿಂದ ಪತ್ನಿಯ ತಲೆಗೆ ಹೊಡೆದಿದ್ದ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ADVERTISEMENT

‘ಸೋಮವಾರ ಬೆಳಗ್ಗೆ ಸುಮಾರು 8.30 ಗಂಟೆಗೆ ದುರ್ಗೇಶ್ ತನ್ನ ಅಣ್ಣ ಮಧು ಅವರಿಗೆ ಕರೆ ಮಾಡಿ ಸರಿತಾ ಸತ್ತಿರುವ ವಿಷಯ ತಿಳಿಸಿದ್ದ. ಮಧು ಅವರು ಸ್ಥಳಕ್ಕೆ ಬಂದು ನೋಡಿದಾಗ ಸರಿತಾ ಮುಖಕ್ಕೆ ಬಲವಾದ ಏಟು ಬಿದ್ದಿದು ಕಂಡು ಬಂದಿತ್ತು.ಸರಿತಾ ಅವರು ಮೃತಪಟ್ಟ ವಿಷಯ ತಿಳಿದು, ಸ್ಥಳೀಯ ನಿವಾಸಿಯೊಬ್ಬರು ಅವರ ಸೋದರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಈ ಬಗ್ಗೆ ಸರಿತಾ ಅವರ ತಂಗಿ ಬಜಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಸರಿತಾ 12 ವರ್ಷಗಳ ಹಿಂದೆ ದುರ್ಗೇಶ್ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ಮದುವೆಯಾದ ಬಳಿಕ ದುರ್ಗೇಶ್‌ ಪತ್ನಿಗೆ ಯಾವಾಗಲೂ ಬೈದು, ಹೊಡೆಯುತ್ತಿದ್ದ’ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.

ಅನಾಥವಾದ ಬಾಲಕ:

ತಂದೆ ತಾಯಿ ಜಗಳವಾಡುವಾಗ ಅವರ ಮಗ ರಾಹುಲ್ ಕೂಡಾ ಸ್ಥಳದಲ್ಲಿದ್ದ. ಜಗಳ ನೋಡಿ ಹೆದರಿಕೊಂಡ ಬಾಲಕ ಅಜ್ಜಿಯ ಮನೆಗೆ ಓಡಿ ಹೋಗಿದ್ದ. ಬಾಲಕನ ತಾಯಿ ಮೃತ ಪಟ್ಟಿದ್ದರೆ, ತಂದೆ ಜೈಲು ಸೇರಿದ್ದಾರೆ. ತಂದೆ ತಾಯಿ ಜಗಳ ಕೊಲೆಯಲ್ಲಿ ಪರ್ಯಾವಸಾನಗೊಂಡಿದ್ದರಿಂದ ಬಾಲಕ ಅನಾಥವಾಗಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.