ಪ್ರಜಾವಾಣಿ ವಾರ್ತೆ
ಬೆಳ್ತಂಗಡಿ: ಅಕ್ರಮವಾಗಿ ಮೂರು ದನಗಳನ್ನು ಕಾರಿನಲ್ಲಿ ಸಾಗಿಸುತ್ತಿದ್ದ ಘಟನೆ ಗುರುವಾಯನಕೆರೆಯಲ್ಲಿ ಬುಧವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ನಕಲಿ ನಂಬರ್ ಪ್ಲೇಟ್ ಅಳವಡಿಸಿಕೊಂಡು ಇನ್ನೊವಾ ಕಾರಿನಲ್ಲಿ ಚಿಕ್ಕಮಗಳೂರಿನ ಮುಡಗೇರಿ ಎಂಬಲ್ಲಿಂದ ಮೂರು ದನಗಳನ್ನು ತುಂಬಿಸಿಕೊಂಡು ಅತೀವೇಗದಲ್ಲಿ ಚಾರ್ಮಾಡಿ ಮೂಲಕ ಮಂಗಳೂರು ಕಡೆಗೆ ಸಾಗಿಸುತ್ತಿದ್ದ ವೇಳೆ ಗುರುವಾಯನಕೆರೆಯಲ್ಲಿ ಇನ್ನೊವಾ ಕಾರು ರಿಕ್ಷಾ ಹಾಗೂ ಹಾಗೂ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಸ್ಥಳದಲ್ಲಿದ್ದ ಕರ್ತವ್ಯ ನಿರತ ಪೊಲೀಸರು ವಾಹನವನ್ನು ನಿಲ್ಲಿಸಲು ಸೂಚಿಸಿದ ವೇಳೆ ಪೊಲೀಸರನ್ನು ದೂಡಿ ವಾಹನದಲ್ಲಿದ್ದ ಮೂವರು ಆರೋಪಿಗಳ ಪೈಕಿ ಇಬ್ಬರು ಪರಾರಿಯಾಗಿದ್ದಾರೆ.
ಕಾರನ್ನು ಚಲಾಯಿಸುತ್ತಿದ್ದ ಮೂಡುಬಿದಿರೆ ಸುವರ್ಣ ನಗರ ನಿವಾಸಿ ಆರಿಫ್ (26)ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪರಾರಿಯಾಗಿರುವ ಇಬ್ಬರು ಆರೋಪಿಗಳು ಮೂಡುಬಿದಿರೆ ಸುವರ್ಣ ನಗರ ನಿವಾಸಿಗಳಾಗಿದ್ದು, ರಜ್ವಾನ್ (30) ಹಾಗೂ ಸಾಯಿಲ್ (22) ಎಂದು ತಿಳಿದು ಬಂದಿದೆ. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಾಹನದಲ್ಲಿ ಒಟ್ಟು ಮೂರು ದನಗಳಿದ್ದು, ಇದರಲ್ಲಿ ಒಂದು ದನಕ್ಕೆ ಪೆಟ್ಟಾಗಿದ್ದು ಸ್ಥಳೀಯರು ಉಪಚರಿಸಿದರು.
ಸಂಚಾರ ದಟ್ಟಣೆ:
ಘಟನೆ ನಡೆಯುತ್ತಿದ್ದಂತೆ ಸಾರ್ವಜನಿಕರು ಜಮಾಯಿಸಿದ ಕಾರಣ ಗುರುವಾಯನಕೆರೆಯಲ್ಲಿ ಸುಮಾರು 2 ಗಂಟೆ ಕಾಲ ಸಂಚಾರ ದಟ್ಟಣೆ ಉಂಟಾಯಿತು. ಬೆಳಗಿನ ಸಮಯವಾದ ಕಾರಣ ಶಾಲಾ ಮಕ್ಕಳು, ಉದ್ಯೋಗಿಗಳು ಸಂಚಾರ ದಟ್ಟಣೆಯಿಂದ ತೊಂದರೆ ಅನುಭವಿಸಿದರು. ಸಂಚಾರ ಪೊಲೀಸರು ಸುಗಮ ವಾಹನ ಸಂಚಾರಕ್ಕೆ ಸಹಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.