ಮಂಗಳೂರು: ಆದಾಯ ತೆರಿಗೆ ಪ್ರಧಾನ ಆಯುಕ್ತರ ಕಚೇರಿಯನ್ನು ಮಂಗಳೂರಿನಲ್ಲೇ ಮುಂದುವರಿಸಲು ಕೇಂದ್ರ ಸರ್ಕಾರ ಸಮ್ಮತಿ ನೀಡಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದಾರೆ.
ಕರಾವಳಿ ಕರ್ನಾಟಕದ ತೆರಿಗೆದಾರರ ಹಿತಾಸಕ್ತಿಗೆ ಪೂರಕವಾಗಿ ಆದಾಯ ತೆರಿಗೆ ಪ್ರಧಾನ ಆಯುಕ್ತರ ಕಾರ್ಯಾಲಯವನ್ನು ಮಂಗಳೂರಿನಲ್ಲಿಯೇ ಮುಂದುವರೆಸಲು ಕೇಂದ್ರದ ಮಾನ್ಯ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಸಮ್ಮತಿಸಿದ್ದಾರೆ ಎಂದು ಹೇಳಿದ್ದಾರೆ.
ನನ್ನ ವೈಯಕ್ತಿಕ ಮನವಿಯನ್ನು ಪುರಸ್ಕರಿಸಿದ ಕೇಂದ್ರದ ಮಾನ್ಯ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರಿಗೆ ಕರಾವಳಿಯ ಸಮಸ್ತ ತೆರಿಗೆದಾರರ, ಲೆಕ್ಕಪರಿಶೋಧಕರ ಪರವಾಗಿ ಅನಂತ ಧನ್ಯವಾದಗಳು. ಇದಕ್ಕೆ ಸಹಕರಿಸಿದ ಕೇಂದ್ರದ ಮಾನ್ಯ ಸಚಿವರಾದ ಪ್ರಲ್ಹಾದ್ ಜೋಶಿ, ಸದಾನಂದ ಗೌಡ ಅವರಿಗೂ ಕೃತಜ್ಞತೆಗಳು ಎಂದು ಅವರು ತಿಳಿಸಿದ್ದಾರೆ.
ಈ ಬಗ್ಗೆ ಕೇಂದ್ರ ಸಚಿವ ಸದಾನಂದ ಗೌಡ ಅವರೂ ಟ್ವೀಟ್ ಮಾಡಿದ್ದಾರೆ.ಆದಾಯ ತೆರೆಗೆ ಆಯುಕ್ತರ ಕಚೇರಿಯನ್ನು ಮಂಗಳೂರಿನಿಂದ ಬೇರೆಡೆ ಸ್ಥಳಾಂತರಿಸುವ ಪ್ರಸ್ತಾಪ ನನ್ನ ಗಮನಕ್ಕೆ ಬಂದಾಗ ತಕ್ಷಣವೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನುಭೇಟಿಯಾಗಿ, ಕಚೇರಿಯನ್ನು ಮಂಗಳೂರಿನಲ್ಲೇ ಮುಂದುವರೆಯುವ ಅಗತ್ಯವನ್ನು ವಿವರಿಸಿದ್ದೆ. ಈ ಬೇಡಿಕೆಯನ್ನು ಮಾನ್ಯ ಮಾಡಿದ ಸಚಿವರಿಗೆ ಹೃತ್ಪೂರ್ವಕ ಧನ್ಯವಾದಗಳು ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.