ಮಂಗಳೂರು: ರೈಲ್ವೆ ಸಚಿವಾಲಯದ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಮಂಗಳೂರಿನ ಜನರ ಅನುಕೂಲಕ್ಕಾಗಿ ರೈಲು ಹಾಗೂ ವಿಮಾನ ಪ್ರವಾಸದ ಟೂರ್ ಪ್ಯಾಕೇಜ್ಗಳನ್ನು ರೂಪಿಸಿದೆ ಎಂದು ಐಆರ್ಸಿಟಿಸಿ ಜಂಟಿ ಪ್ರಧಾನ ವ್ಯವಸ್ಥಾಪಕ (ಪ್ರವಾಸೋದ್ಯಮ) ಸ್ಯಾಮ್ ಜೋಸೆಫ್ ಪಿ. ಹೇಳಿದರು.
ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿರುವ ಪಂಚ ಜ್ಯೋತಿರ್ಲಿಂಗ ದೇವಾಲಯಗಳಿಗೆ ಭೇಟಿ ನೀಡುವ ‘ಭಾರತ್ ಗೌರವ್ ಟೂರಿಸ್ಟ್ ರೈಲು– ಪಂಚ ಜ್ಯೋತಿರ್ಲಿಂಗ ಯಾತ್ರೆ’ ತಿರುನೆಲ್ವೆಲಿಯಿಂದ ಆರಂಭವಾಗಿ ಕೇರಳದ ಮೂಲಕ ನ.21ರಂದು ಸಂಜೆ ಮಂಗಳೂರು ಜಂಕ್ಷನ್ ತಲುಪುತ್ತದೆ. ಜ್ಯೋತಿರ್ಲಿಂಗ ದೇವಾಲಯಗಳ ಜೊತೆಗೆ, ಗೋಪಿ ತಲಾವ್, ಬೇಟ್ ದ್ವಾರಕಾ, ದ್ವಾರಕಾದ ಬಳಿಯ ರುಕ್ಮಿಣಿ ಮಾತಾ ಮಂದಿರ, ಎಲ್ಲೋರಾ ಗುಹೆಗಳಿಗೆ ಭೇಟಿ ಇರಲಿದೆ. ಪ್ಯಾಕೇಜ್ ದರವು ವಯಸ್ಕರಿಗೆ ₹31,930 ನಿಗದಿಯಾಗಿದೆ’ ಎಂದರು.
ಕಾಶಿ, ಪ್ರಯಾಗ್ರಾಜ್, ಅಯೋಧ್ಯೆ ಒಳಗೊಂಡು ದೇಶೀಯ ವಿಮಾನ ಪ್ಯಾಕೇಜ್ ಇದೆ. ನ.25ರಂದು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆರಂಭವಾಗಿ ನ.29ಕ್ಕೆ ಪೂರ್ಣಗೊಳ್ಳುತ್ತದೆ. ಈ ಪ್ಯಾಕೇಜ್ನಲ್ಲಿ ಮಂಗಳೂರು ಮತ್ತು ವಾರಾಣಸಿಯ ನಡುವೆ ಎಕಾನಮಿ ಕ್ಲಾಸ್ ವಿಮಾನ ಟಿಕೆಟ್ಗಳು, ವಾರಾಣಸಿಯಲ್ಲಿ ಮೂರು ರಾತ್ರಿ ಮತ್ತು ಅಯೋಧ್ಯೆಯಲ್ಲಿ ಒಂದು ರಾತ್ರಿ ವಾಸ್ತವ್ಯ, ವಿಮಾನ ನಿಲ್ದಾಣದಿಂದ ವಾಸಸ್ಥಾನಕ್ಕೆ ಮತ್ತು ದೃಶ್ಯವೀಕ್ಷಣೆ ಸ್ಥಳಗಳಿಗೆ ಎಸ್ಐಸಿ ಆಧಾರದ ಮೇಲೆ ಸಾರಿಗೆ, ಟೂರ್ ಕೋ ಆರ್ಡಿನೇಟರ್ ಸೇವೆಗಳು ಮತ್ತು ಪ್ರಯಾಣ ವಿಮೆ ಇರಲಿದೆ. ಪ್ಯಾಕೇಜ್ ದರ ವಯಸ್ಕರಿಗೆ ₹36,600ರಿಂದ ಪ್ರಾರಂಭವಾಗುತ್ತದೆ ಎಂದರು.
ಐಆರ್ಸಿಟಿಸಿ ಮಂಗಳೂರಿನಿಂದ ಊಟಿಗೆ ಸಾಪ್ತಾಹಿಕ ವಿರಾಮ ಪ್ಯಾಕೇಜ್ ಅನ್ನು ನಿರಂತರವಾಗಿ ನಡೆಸುತ್ತಿದೆ. ಪ್ರತಿ ಗುರುವಾರ ರಾತ್ರಿ ವೆಸ್ಟ್ ಕೋಸ್ಟ್ ಎಕ್ಸ್ಪ್ರೆಸ್ನಲ್ಲಿ ಮಂಗಳೂರು ಸೆಂಟ್ರಲ್ನಿಂದ ಪ್ರಯಾಣ ಆರಂಭಿಸಿ ಶುಕ್ರವಾರ ಬೆಳಿಗ್ಗೆ ಕೊಯಮತ್ತೂರು ರೈಲು ನಿಲ್ದಾಣ ತಲುಪಬಹುದು. ಅಲ್ಲಿಂದ ಭಾನುವಾರ ರಾತ್ರಿ ಹೊರಟು, ಸೋಮವಾರ ಬೆಳಿಗ್ಗೆ ಮಂಗಳೂರು ಸೆಂಟ್ರಲ್ಗೆ ಬರಬಹುದು. ಸ್ಲೀಪರ್ ಕ್ಲಾಸ್ ದರವು ₹10,160ರಿಂದ ಪ್ರಾರಂಭವಾಗುತ್ತದೆ ಎಂದು ಹೇಳಿದರು.
ಮಾಹಿತಿಗೆ ರೈಲ್ವೆ ಇಲಾಖೆಯ ವೆಬ್ಸೈಟ್ (www.irctctourism.com), ದೂರವಾಣಿ: 0824–2001936, 8287932098 ಈ ಸಂಖ್ಯೆ ಸಂಪರ್ಕಿಸಬಹುದು ಎಂದರು. ಹಿರಿಯ ವ್ಯವಸ್ಥಾಪಕ ವಿನೋದ್ ನಾಯರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.