ಮಂಗಳೂರು: ಮನ್ಕುತೋಟಗುತ್ತು ಮತ್ತು ನಾಡಾಜೆಗುತ್ತು ದಿ. ಜೆ. ಜಯಗಂಗಾಧರ ಶೆಟ್ಟಿ ಸ್ಮರಣಾರ್ಥ ಜಪ್ಪಿನಮೊಗರುವಿನಲ್ಲಿ ಹೊನಲುಬೆಳಕಿನ ಜಯ-ವಿಜಯ ಜೋಡುಕರೆ ಕಂಬಳವು ಫೆ.10 ಮತ್ತು 11ರಂದು ನಡೆಯಲಿದೆ ಎಂದು ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಉಮೇಶ್ ಅತಿಕಾರಿ ತಿಳಿಸಿದರು.
ಇಲ್ಲಿ ಈ ಕುರಿತ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘14ನೇ ವರ್ಷದ ಈ ಕಂಬಳವನ್ನು ಫೆ.10ರಂದು ಬೆಳಿಗ್ಗೆ 8.30ಕ್ಕೆ ವಿಠಲದಾಸ್ ತಂತ್ರಿ ಉದ್ಘಾಟಿಸುವರು. ಕರಾವಳಿ ಕಾಲೇಜು ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಎಸ್. ಗಣೇಶ್ ರಾವ್ ಅಧ್ಯಕ್ಷತೆ ವಹಿಸುವರು. ಸಂಜೆ 7ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ವಿಧಾನ ಸಭಾಧ್ಯಕ್ಷ ಯು. ಟಿ. ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು. ಸಿನಿಮಾ ನಟ ರೂಪೇಶ್ ಶೆಟ್ಟಿ, ವಿ.ಜೆ.ವಿನೀತ್, ನಟಿ ಸಮಂತಾ ಅಮೀನ್ ಭಾಗವಹಿಸುವರು. ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರದ ಆನುವಂಶಿಕ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಆಶೀರ್ವಚನ ನೀಡುವರು’ ಎಂದರು.
ಕಂಬಳ ಸಮಿತಿಯ ಗೌರವಾಧ್ಯಕ್ಷ, ಶಾಸಕ ಡಿ.ವೇದವ್ಯಾಸ ಕಾಮತ್, ‘ನೇತ್ರಾವತಿ ನದಿ ತೀರದಲ್ಲಿ ನಡೆಯುವ ಈ ಕಂಬಳದಲ್ಲಿ ಕಳೆದ ವರ್ಷ 144 ಜೋಡಿ ಕೋಣಗಳು ಭಾಗವಹಿಸಿದ್ದವು. ಈ ಸಲ 150ಕ್ಕೂ ಹೆಚ್ಚು ಜೋಡಿ ಕೋಣಗಳು ಭಾಗವಹಿಸುವ ನಿರೀಕ್ಷೆ ಇದೆ. ವಿಜೇತ ಕೋಣಗಳಿಗೆ ಚಿನ್ನದ ಪದಕದ ಜೊತೆಗೆ ಶಾಶ್ವತ ಫಲಕವನ್ನೂ ನೀಡಲಾಗುತ್ತದೆ. ಒಟ್ಟು 14 ಪವನ್ ಬಂಗಾರವನ್ನು ಬಹುಮಾನದ ರೂಪದಲ್ಲಿ ನೀಡಲಾಗುತ್ತದೆ’ ಎಂದರು.
ಸಮಿತಿಯ ಗೌರವ ಸಲಹೆಗಾರ ಜಪ್ಪುಗುಡ್ಡೆ ಗುತ್ತು ಭುಜಂಗೆಟ್ಟಿ, ಕಂಬಳ ಸಮಿತಿ ಅಧ್ಯಕ್ಷ ಮನ್ಕುತೋಟಗುತ್ತು ಅನಿಲ್ ಜೆ. ಶೆಟ್ಟಿ, ಕಂಬಳ ಸಮಿತಿ ಕಾರ್ಯಾಧ್ಯಕ್ಷರಾದ ವೀಣಾಮಂಗಳ, ಪ್ರವೀಣಚಂದ್ರ ಆಳ್ವ ತಿರುವೈಲ್ ಗುತ್ತು, ಶಕೀನ್ ಶೆಟ್ಟಿ, ಸಂತೋಷ್ ಆಳ್ವ, ಕಾರ್ಯದರ್ಶಿ ಸಂದೀಪ್ ಶೆಟ್ಟಿ ಎಕ್ಕೂರು, ಪ್ರಚಾರ ಸಮಿತಿ ಸಂಚಾಲಕ ಜೆ.ನಾಗೇಂದ್ರ, ಪ್ರಧಾನ ಸಂಚಾಲಕ ಚಿತ್ತರಂಜನ್ ಬೋಳಾರ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.