ಕಡಬ(ಉಪ್ಪಿನಂಗಡಿ): ಕಸ್ತೂರಿ ರಂಗನ್ ವರದಿ ಜಾರಿಯನ್ನು ಕೈಬಿಡುವಂತೆ ಆಗ್ರಹಿಸಿ ಮಲೆನಾಡು ಜನಹಿತರಕ್ಷಣಾ ವೇದಿಕೆ ವತಿಯಿಂದ ಕಡಬದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
ಕಡಬ ಎಪಿಎಂಸಿ. ಪ್ರಾಂಗಣದ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ‘ಕಸ್ತೂರಿ ರಂಗನ್ ವರದಿ ಅನುಷ್ಠಾನವನ್ನು ಪೂರ್ಣವಾಗಿ ಕೈಬಿಡಬೇಕು. ಅಲ್ಲಿಯವರೆಗೆ ಹೋರಾಟ ನಿಲ್ಲುವುದಿಲ್ಲ, ಅರಣ್ಯ ಇಲಾಖೆಯ
ಅನುಮತಿ ಪಡೆಯದೆ ಕಂದಾಯ ಇಲಾಖೆ ಅಕ್ರಮ ಸಕ್ರಮ, 94-ಸಿ ಅಡಿಯಲ್ಲಿ ರೈತರಿಗೆ ಹಕ್ಕು ಪತ್ರ ವಿತರಿಸಿದೆ. ಹಕ್ಕು ಪತ್ರ ಪಡೆದ ರೈತರು ಕೃಷಿ, ಇನ್ನಿತರ ಚಟುವಟಿಕೆ ನಡೆಸುತ್ತಿದ್ದಾರೆ. ಇದಕ್ಕೆ ಅರಣ್ಯ ಇಲಾಖೆ ಆಕ್ಷೇಪಿಸುತ್ತಿದ್ದು, ಇದರಿಂದ ರೈತರು ಗೊಂದಲದಲ್ಲಿದ್ದಾರೆ. ಕಂದಾಯ ಇಲಾಖೆ ಈ ಬಗ್ಗೆ ಅರಣ್ಯ ಇಲಾಖೆಗೆ ಸ್ಪಷ್ಟ ಸೂಚನೆ ನೀಡಬೇಕು, ಅರಣ್ಯ ಮತ್ತು ಕಂದಾಯ ಭೂಮಿಗಳ ಗಡಿಗುರುತು ನಡೆಸಬೇಕು’ ಎಂದು ಆಗ್ರಹಿಸಿದರು.
ಪ್ರತಿಭಟನೆ ಬಳಿಕ ಕಡಬ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಮಲೆನಾಡು ಜನಹಿತರಕ್ಷಣಾ ವೇದಿಕೆಯ ಕಿಶೋರ್ ಶಿರಾಡಿ, ದಾಮೋದರ ಗುಂಡ್ಯ ಮಾತನಾಡಿದರು. ಅಚ್ಯುತ ಗೌಡ, ಆಶೋಕ್ ಕುಮಾರ್ ಸುಬ್ರಹ್ಮಣ್ಯ, ಹರೀಶ್ ಕಲ್ಲುಗುಂಡಿ, ಯಶೋದರ ಕೊಣಾಜೆ, ಕೃಷ್ಣ ಶೆಟ್ಟಿ ಕಡಬ, ಸೈಯ್ಯದ್ ಮೀರಾ ಸಾಹೇಬ್, ಮೇದಪ್ಪ ಗೌಡ, ಸನ್ನಿ ಉದನೆ, ಗಣೇಶ್ ಅನಿಲ, ಪ್ರಸನ್ನ ಕುಮಾರ್ ಮಣಿಬಾಂಡ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.