
ಪುತ್ತೂರು: ಕಂಬಳದ ಕರೆಯಲ್ಲಿ ತರಬೇತಿಗಾಗಿ ಓಡಿಸಲಾಗುತ್ತಿದ್ದ ಕೋಣಗಳೆರಡು ಕಂಬಳಕರೆಯ ಮಂಜೊಟ್ಟಿ ತಲುಪಿದ ಬಳಿಕ ಓಟಗಾರನ ಕೈಯಿಂದ ತಪ್ಪಿಸಿಕೊಂಡು ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ವರೆಗೆ ರಸ್ತೆಯಲ್ಲೇ ಓಡಿ ಗಾಬರಿ ಮೂಡಿಸಿದ ಘಟನೆ ಪುತ್ತೂರಿನಲ್ಲಿ ಮಂಗಳವಾರ ನಡೆದಿದೆ.
ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ದೇವರುಮಾರು ಗದ್ದೆಯಲ್ಲಿರುವ ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳದ ಕರೆಯಲ್ಲಿ ಚೆನ್ನಾವರದ ಸೈಯ್ಯದ್ ಅಬ್ಬಾಸ್ ಅವರ ಮಕ್ಕಳು ಕಂಬಳದ ಕೋಣಗಳನ್ನು ತರಬೇತಿಗೊಳಿಸುತ್ತಿದ್ದರು. ಮಂಜೊಟ್ಟಿ ತಲುಪುತ್ತಿದ್ದಂತೆ ಕೋಣಗಳು ಓಟಗಾರನ ಕೈಯಿಂದ ತಪ್ಪಿಸಿಕೊಂಡು ಮತ್ತೆ ಕಂಬಳದ ಕರೆಯಲ್ಲೇ ಓಡಿ ರಸ್ತೆಗೆ ಹೋಗಿವೆ. ಅಲ್ಲಿಂದ ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದ ಆವರಣದ ಮೂಲಕ ಮತ್ತೆ ರಸ್ತೆಗೆ ಹೋಗಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದವರೆಗೆ ಓಡಿವೆ.
ಕೋಣಗಳು ಪೇಟೆಯ ಕಡೆಗೆ ಓಡಿ ಹೋದ ಕೂಡಲೇ ಕೋಣಗಳನ್ನು ಓಡಿಸುತ್ತಿದ್ದವರು ಬೈಕ್ನಲ್ಲಿ ಹಿಂಬಾಲಿಸಿಕೊಂಡು ಹೋಗಿ ಬಸ್ ನಿಲ್ದಾಣದ ಸಮೀಪ ತಡೆದು ಕಂಬಳದ ಕರೆಗೆ ಕರೆದೊಯ್ದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.