
ಮಂಗಳೂರು: ಒಂಬತ್ತನೇ ವರ್ಷದ ಮಂಗಳೂರು ಕಂಬಳವು ಜಾನಪದ ಸೊಗಡಿನ ಕೋಣಗಳ ಓಟದ ಸೊಬಗಿನೊಂದಿಗೆ, ನವ ವಿಧದ ವಿಶೇಷತೆಗಳಿಗೆ ಸಾಕ್ಷಿಯಾಯಿತು.
ಬಂಗ್ರಕೂಳೂರಿನ ಗೋಲ್ಡ್ಫಿಂಚ್ ಸಿಟಿಯಲ್ಲಿ ಶನಿವಾರ ನಡೆದ ಮಂಗಳೂರು ಕಂಬಳದ ಜೊತೆಗೆ ರಾಣಿ ಅಬ್ಬಕ್ಕ ಚರಿತ್ರೆಯ ಚಿತ್ರಕಲಾ ಪ್ರದರ್ಶನ, ಪ್ರಧಾನಿ ನರೇಂದ್ರ ಮೋದಿ ಅವರ ‘ಏಕ್ ಪೇಡ್ ಮಾ ಕೆ ನಾಮ್’ ಅಭಿಯಾನದಡಿ ಗಿಡ ಗಳ ವಿತರಣೆ, ‘ಬ್ಯಾಕ್ ಟು ಊರು’ ಉದ್ಯಮಿಗಳಿಗೆ ಸನ್ಮಾನ, ವೃದ್ಧಾಶ್ರಮದ ಹಿರಿಯ ಚೇತನಗಳೊಂದಿಗೆ ಸಂಭ್ರಮ ಹಂಚಿಕೊಳ್ಳುವ ಐದು ವಿಶಿಷ್ಟ ಚಟುವಟಿಕೆ ನಡೆದವು.
ಮಕ್ಕಳಿಗಾಗಿ ‘ರಂಗ್ ದ ಕೂಟ’ ಚಿತ್ರಕಲೆ, ಫೋಟೊಗ್ರಫಿ, ರೀಲ್ಸ್ ಹಾಗೂ ತಾಂತ್ರಿಕತೆಯ ಮೆರುಗಿನ ಎಐ ಕ್ರಿಯೇ ಟಿವ್ ಯೋಧ ಸೇರಿ ನಾಲ್ಕು ವೈವಿಧ್ಯ ಸ್ಪರ್ಧೆಗಳು ಯುವಜನರನ್ನು ಸೆಳೆದವು.
ಕಂಬಳದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಮಂಗಳೂರು ಕಂಬಳ ಸಮಿತಿ ಅಧ್ಯಕ್ಷರಾಗಿರುವ ಸಂಸದ ಕ್ಯಾ. ಬ್ರಿಜೇಶ್ ಚೌಟ, ‘ಮಂಗಳೂರು ಸನಾತನ ಸಂಸ್ಕೃತಿಯ ನೆಲೆಬೀಡು ಮತ್ತು ತುಳುನಾಡಿನ ಅಸ್ಮಿತೆ. ದಕ್ಷಿಣ ಕನ್ನಡ ಜಿಲ್ಲೆಯ ಬಗ್ಗೆ ತಪ್ಪು ಅಭಿಪ್ರಾಯ, ಅಪಪ್ರಚಾರ ಹುಟ್ಟು ಹಾಕುವ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಹೋರಾಡುವ ಜೊತೆಗೆ, ಸ್ಥಳೀಯರ ಪಾಲ್ಗೊಳ್ಳುವಿಕೆಯೊಂದಿಗೆ, ‘ಮಂಗಳೂರು 2.0’ ಹಾಗೂ ‘ವಿಕಸಿತ ಮಂಗಳೂರು’ ನಿರ್ಮಾಣ ಮಾಡುವುದು ನಮ್ಮೆಲ್ಲರ ಕರ್ತವ್ಯ’ ಎಂದರು.
ಕಂಕನಾಡಿ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಟೀಲು ದುರ್ಗಾಪರಮೇಶ್ವರಿ ದೇವಳದ ಅರ್ಚಕ ಅನಂತ ಪದ್ಮನಾಭ ಅಸ್ರಣ್ಣ, ಕ್ಯಾ.ಗಣೇಶ್ ಕಾರ್ಣಿಕ್, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ತುಕರಾಮ ಪೂಜಾರಿ, ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಸುನಿಲ್ ಆಚಾರ್, ವಿನೋದ್ ಶೆಣೈ, ಪ್ರಸಾದ್ ಕುಮಾರ್ ಶೆಟ್ಟಿ, ಜಯಾನಂದ್ ಅಂಚನ್, ಕದ್ರಿ ನವನೀತ್ ಶೆಟ್ಟಿ, ಅನಿಲ್ ಕುಮಾರ್, ಮನೋಹರ್ ಜೋಶಿ, ಕಿರಣ್ ಕುಮಾರ್ ಕೋಡಿಕಲ್, ಶಕೀಲಾ ಕಾವ, ಸಂಧ್ಯಾ ಅಚಾರ್, ಶೋಭಾ ರಾಜೇಶ್, ಎಚ್.ಕೆ ಪುರುಷೋತ್ತಮ, ಪ್ರದೀಪ್ ಕುಮಾರ್ ಕಲ್ಕೂರ, ಗೋಪಾಲ್ ಕುತ್ತಾರ್ ಮುಂತಾದವರು ಉಪಸ್ಥಿತರಿದ್ದರು.
‘ವಂದೇ ಮಾತರಂ’ ಗಾಯನ
ವಂದೇ ಮಾತರಂ ಗೀತೆಗೆ 150 ವರ್ಷ ತುಂಬಿದ ಸಂಭ್ರಮಕ್ಕಾಗಿ ಶ್ವೇತವಸ್ತ್ರ ಧರಿಸಿದ 150 ವಿದ್ಯಾರ್ಥಿನಿಯರು ಕೆಸರು ಗದ್ದೆಯ ಬದಿಯಲ್ಲಿ ನಿಂತು ಏಕಕಂಠದಿಂದ ಈ ಗೀತೆಯನ್ನು ಹಾಡಿದರು. ತುಳುನಾಡಿನ ಮಣ್ಣಿನ ವಾಸನೆ ಮತ್ತು ತಾಯಿ ಭಾರತಾಂಬೆಯ ಸ್ತುತಿ ಒಂದಾದ ಆ ಕ್ಷಣ ಪ್ರೇಕ್ಷಕರ ಮನದಲ್ಲಿ ದೇಶಪ್ರೇಮದ ಅಲೆ ಎಬ್ಬಿಸಿತು.
ಕಂಬಳ ನಮ್ಮ ಅಸ್ಮಿತೆ. ನಮ್ಮ ನಂಬಿಕೆಯನ್ನು ಅನಂತ ಕಾಲ ಉಳಿಸಿಕೊಳ್ಳಬೇಕು. ಕಂಬಳಕ್ಕೆ ಅಡ್ಡಿಪಡಿಸುವ ಪೇಟಾ ಮುಂದೆ ಕೋಲ ನೇಮಕ್ಕೂ ಅಡ್ಡಿಪಡಿಸುವ ಸಾಧ್ಯತೆ ಇದೆ. ನಾವು ಎಚ್ಚೆತ್ತುಕೊಳ್ಳಬೇಕು.–ರಾಜಶೇಖರಾನಂದ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.