ADVERTISEMENT

ಪರಿಶಿಷ್ಟ ಜಾತಿಯವರನ್ನು ಕೀಳಾಗಿ ತೋರಿಸಲಾಗಿದೆ: ಕಾಂತಾರ ಸಿನಿಮಾಗೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2022, 13:33 IST
Last Updated 11 ನವೆಂಬರ್ 2022, 13:33 IST
   

ಮಂಗಳೂರು: ‘ದೈವಾರಾಧನೆಯಲ್ಲಿ ತೊಡಗಿರುವ ಪರಿಶಿಷ್ಟ ಜಾತಿಗೆ ಸೇರಿದ ಸಮುದಾಯವನ್ನುಕಾಂತಾರ ಒಂದು ದಂತಕತೆ ಚಲನಚಿತ್ರದ ಕೆಲವು ದೃಶ್ಯಗಳಲ್ಲಿ ಕೀಳಾಗಿ ಬಿಂಬಿಸಲಾಗಿದೆ. ದೈವಾರಾಧನೆಯನ್ನು ವಿಕೃತಗೊಳಿಸಿ ಹಿಂಸೆಯನ್ನು ಪ್ರಚೋದಿಸಲಾಗಿದೆ’ ಎಂದು ಸಮತಾ ಸೈನಿಕ ದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಲಾಕ್ಷ ಆಕ್ಷೇಪ ವ್ಯಕ್ತಪಡಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಈ ಸಿನಿಮಾದಲ್ಲಿರುವ ಆಕ್ಷೇಪಾರ್ಹ ದೃಶ್ಯಗಳಿಗೆ ಕತ್ತರಿ ಹಾಕಬೇಕು. ಅಲ್ಲಿಯವರೆಗೆ ಚಿತ್ರ ಪ್ರದರ್ಶನವನ್ನು ಸ್ಥಗಿತಗೊಳಿಸಬೇಕು’ ಎಂದು ಒತ್ತಾಯಿಸಿದರು.

‘ಚಿತ್ರ ತಂಡದ ಬಗ್ಗೆ ನಮ್ಮ ಆಕ್ಷೇಪವಿಲ್ಲ. ಸಿನಿಮಾದಲ್ಲಿ ದೈವನರ್ತಕ ಸಮುದಾಯದ ವ್ಯಕ್ತಿಗಳನ್ನು ಅದರಲ್ಲೂ ಮಹಿಳೆಯರನ್ನು ಮತ್ತು ಯುವಜನರನ್ನು ಅವಮಾನ ಮಾಡುವ ದೃಶ್ಯಗಳಿವೆ. ದೈವಾರಾಧನೆಯಲ್ಲಿ ಮಾನವ ವಿರೋಧಿ ಹಿಂಸೆಗೆ ಅವಕಾಶ ಇಲ್ಲ. ಈ ಚಿತ್ರದ ಕೆಲವು ದೃಶ್ಯಗಳಿಂದ ದೈವನಿಂದನೆ ಆಗಿದೆ. ಆದರೂ ಈ ಸಿನಿಮಾ‌ಕ್ಕೆ ಚಲನಚಿತ್ರ ಸೆನ್ಸಾರ್‌ ಮಂಡಳಿಯು ಯು/ಎ ಪ್ರಮಾಣಪತ್ರವನ್ನು ನೀಡಿದೆ. ಈ ಕ್ರಮ ಸರಿಯಲ್ಲ’ ಎಂದರು.

ADVERTISEMENT

‘ಅಸ್ಪೃಶ್ಯತಾ ಆಚರಣೆ ಮತ್ತು ಪರಿಶಿಷ್ಟ ಸಮುದಾಯಗಳ ಅವಮಾನ, ದೌರ್ಜನ್ಯಗಳು ಶಿಕ್ಷಾರ್ಹ ಅಪರಾಧ. ಕಾಂತಾರ ಸಿನಿಮಾದಲ್ಲಿ ಇಂತಹ ಕೆಲವು ದೃಶ್ಯಗಳು ಕಂಡು ದೈವ ನರ್ತಕ ಸಮುದಾಯದವರನ್ನು ನೋಡಿ ನಗುವಂತಾಗಿದೆ. ಇಂತಹ ದೃಶ್ಯಗಳಿಗೆ ಕತ್ತರಿ ಹಾಕುವವರೆಗೆ ಈ ಚಿತ್ರದ ಪ್ರದರ್ಶನವನ್ನು ತಡೆಯಲು ಜಿಲ್ಲಾ ದಂಡಾಧಿಕಾರಿಯವರು ಕ್ರಮಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮೂಡುಬಿದ್ರಿ ಪಾಣಾರ ಸೇವಾ ಸಂಘದ ಅಧ್ಯಕ್ಷ ಪದ್ಮನಾಭ, ಬಾಕುಡ ಸಮಾಜದ ಮುಖಂಡ ಎನ್‌.ಪದ್ಮನಾಭ, ದಲಿತ ಸಂಘರ್ಷ ಸಮಿತಿಯ ಯು.ಉಮೇಶ, ನಾಗೇಶ್‌, ಲಕ್ಷ್ಮಣ ಕಾಂಚನ್‌, ಕಾಂತಪ್ಪ ಬಂಗೇರ, ಕಂಕನಾಡಿಯ ಸತ್ಯಸಾರಾಮಾಣಿ ದೈವಸ್ಥಾನದ ಅನಿಲ್‌ ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.