ಮಂಗಳೂರು: ರಾಜ್ಯ ಸರ್ಕಾರವು ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್ (ಎಡಿಬಿ) ಸಹಯೋಗದಲ್ಲಿ ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳ ಮೂಲ ಸೌಕರ್ಯ ಉನ್ನತೀಕರಿಸುವ ಮೂಲಕ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಯೋಜನೆ ರೂಪಿಸಿದೆ. ಇದರ ಅಂಗವಾಗಿ ರಾಜ್ಯದ ಒಂಬತ್ತು ಕಡೆಗಳಲ್ಲಿ ಉತ್ಕೃಷ್ಟತಾ ಕೇಂದ್ರ ಸ್ಥಾಪಿಸಲು ಮುಂದಾಗಿದೆ.
ಯೋಜನೆಯ ಭಾಗವಾಗಿ ಎಡಿಬಿ ನಿಯೋಗವು ಸೋಮವಾರ ಮಂಗಳೂರಿನ ಕರ್ನಾಟಕ ಪಾಲಿಟೆಕ್ನಿಕ್ ಸಂಸ್ಥೆಗೆ (ಕೆಪಿಟಿ) ಭೇಟಿ ನೀಡಿತು. ಸಂಸ್ಥೆಯ ಅಧಿಕಾರಿಗಳು ಮೂಲ ಸೌಕರ್ಯ ಹಾಗೂ ಉತ್ಕೃಷ್ಟತಾ ಕೇಂದ್ರದ ಸ್ಥಾಪನೆಗೆ ಸಂಬಂಧಿಸಿದ ಸಿದ್ದತೆಗಳ ವರದಿಯನ್ನು ಮಂಡಿಸಿದರು.
ನಿಯೋಗದ ಸದಸ್ಯರು ಕ್ಯಾಂಪಸ್ ಭೇಟಿ, ಕಟ್ಟಡ ಮತ್ತು ಸ್ಥಳ ಪರಿಶೀಲನೆ ನಡೆಸಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಎಡಿಬಿ ನಿಯೋಗದಲ್ಲಿ ತಜ್ಞರಾದ ನಹ್ಯುಮ್ ಕಿಮ್, ಶೌನ್ ಎಂ. ವೆಲ್ಬೋರ್ನ್–ವುಡ್, ಮೊಹಮ್ಮದ್ ಫೈಝ್, ಯಶ್ಪಾಲ್ ಮಲ್ಲಿಕ್, ಸ್ಯಾಮುಯೆಲ್ ಇದ್ದರು.
ಉದ್ದೇಶಿತ ಉತ್ಕೃಷ್ಟತಾ ಕೇಂದ್ರವು ಕೌಶಲಾಭಿವೃದ್ಧಿ, ಉದ್ಯಮದ ಅವಶ್ಯಕತೆಗಳಿಗೆ ಹೊಂದಿಕೊಳ್ಳುವ ತರಬೇತಿ ಮತ್ತು ಡಿಜಿಟಲ್ ಪರಿವರ್ತನೆಗೆ ಉತ್ತೇಜನ ನೀಡುವುದು, ಸ್ಥಳೀಯ ಕೈಗಾರಿಕೆಗಳೊಂದಿಗೆ ಸಹಭಾಗಿತ್ವ ಸ್ಥಾಪಿಸುವ ಉದ್ದೇಶ ಹೊಂದಿದೆ ಎಂದು ತಿಳಿಸಲಾಯಿತು.
ಸಂಸ್ಥೆಯ ಪ್ರಾಚಾರ್ಯ ಹರೀಶ ಶೆಟ್ಟಿ, ಕುಲಸಚಿವೆ ವಿನೋದ ಕುಮಾರಿ ಉಪಸ್ಥಿತರಿದ್ದರು. ಉಪನ್ಯಾಸಕ ಹರೀಶ ಸಿ. ಪಿ. ವರದಿ ಮಂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.