ಮಂಗಳೂರು: ಸಮಾನ ಮನಸ್ಕರು ಸೇರಿಕೊಂಡು ನಡೆಸುತ್ತಿರುವ ಎಂ.ಫ್ರೆಂಡ್ಸ್ ಸಂಘಟನೆಯು ವೆನ್ಲಾಕ್ ಆಸ್ಪತ್ರೆಯ ರೋಗಿಗಳನ್ನು ಉಪಚರಿಸುವವರಿಗೆ ನಿತ್ಯ ಅನ್ನದಾನದಂತಹ ಕಾರುಣ್ಯ ಸೇವೆ ನೀಡುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಹೇಳಿದರು.
ಎಂ.ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್ ನಗರದ ವೆನ್ಲಾಕ್ ಆಸ್ಪತ್ರೆಯ ರೋಗಿಗಳನ್ನು ಉಪಚರಿಸುವವರಿಗೆ ನಿತ್ಯ ಅನ್ನದಾನ ಮಾಡುವ ‘ಕಾರುಣ್ಯ ಸೇವೆ’ಯು ಒಂದು ಸಾವಿರ ದಿನಗಳನ್ನು ಪೂರೈಸಿದ ಕಾರಣ ಸೋಮವಾರ ಇಲ್ಲಿ ಆಯೋಜಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ಕಾರ ಜನರ ಕಲ್ಯಾಣಕ್ಕಾಗಿ ವಿವಿಧ ಯೋಜನೆಗಳನ್ನು ಪ್ರಕಟಿಸಿದರೂ, ಅವುಗಳ ಅನುಷ್ಠಾನದ ಸಂದರ್ಭದಲ್ಲಿ ಕೆಲವು ಇತಿಮಿತಿಗಳನ್ನು ಪಾಲಿಸಬೇಕಾಗುತ್ತದೆ. ಆದರೆ, ಸಂಘ–ಸಂಸ್ಥೆಗಳಿಗೆ ಈ ಎಲ್ಲ ಇತಿಮಿತಿಗಳನ್ನು ಮೀರಿಯೂ ಸಮಾಜಮುಖಿ ಸೇವೆಗಳನ್ನು ಸಲ್ಲಿಸಲು ಮುಕ್ತ ಅವಕಾಶವಿದೆ. ಮುಂದಿನ ದಿನಗಳಲ್ಲಿ ರೋಗಿಗಳ ಉಪಚಾರದಲ್ಲಿ ತೊಡಗಿಸಿಕೊಳ್ಳುವವರಿಗೆ ಜಿಲ್ಲಾಡಳಿತವು ಧರ್ಮಛತ್ರ ನಿರ್ಮಿಸುವ ಬಗ್ಗೆ ಕ್ರಿಯಾಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.
ಎಂ.ಫ್ರೆಂಡ್ಸ್ ಅಧ್ಯಕ್ಷ ಮುಹಮ್ಮದ್ ಹನೀಫ್ ಗೋಳ್ತಮಜಲು ಅಧ್ಯಕ್ಷತೆ ವಹಿಸಿದ್ದರು. ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕ ಡಾ.ಸದಾಶಿವ ಶ್ಯಾನ್ಭೋಗ್, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಉದ್ಯಮಿ ಶರೀಫ್ ವೈಟ್ಸ್ಟೋನ್, ಐಎಂಎ
ಅಧ್ಯಕ್ಷ ಡಾ.ಸಿ.ಪಿ.ಹಬೀಬುರ್ರಹ್ಮಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ನಿರಂತರವಾಗಿ ಒಂದು ಸಾವಿರ ದಿನ ವೆನ್ಲಾಕ್ ಆಸ್ಪತ್ರೆಯ ರೋಗಿಗಳನ್ನು ಉಪಚರಿಸುವವರಿಗೆ ಆಹಾರದ ವ್ಯವಸ್ಥೆ ಕಲ್ಪಿಸುತ್ತಿರುವ ಅಶ್ಫಾಕ್ ಮತ್ತು ಸೌಹಾನ್ ಎಸ್.ಕೆ. ಅವರನ್ನು ಗೌರವಿಸಲಾಯಿತು. ಎಂ.ಫ್ರೆಂಡ್ಸ್ನ ಪ್ರಧಾನ ಕಾರ್ಯದರ್ಶಿ ರಶೀದ್ ವಿಟ್ಲ ಸ್ವಾಗತಿಸಿದರು. ಇರ್ಶಾದ್ ಬೈರಿಕಟ್ಟೆ ಕಿರಾಅತ್ ಪಠಿಸಿದರು. ವಕೀಲ ಅಬೂಬಕರ್ ವಂದಿಸಿದರು. ಪತ್ರಕರ್ತ ಆರೀಫ್ ಪಡುಬಿದ್ರೆ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.