ಮಂಗಳೂರು: ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು ತಾಲ್ಲೂಕು ಘಟಕದ ‘ಹಿರಿಯ ಸಾಹಿತಿಗಳ ಮನೆಗೆ ಭೇಟಿ’ ಕಾರ್ಯಕ್ರಮದಡಿ ಬುಧವಾರ ನಗರದ ಉರ್ವ ಪರಿಸರದ ಸಾಹಿತಿ ಬಿ. ಸುಲೋಚನಾ ಅವರ ನಿವಾಸಕ್ಕೆ ತೆರಳಿ ಅವರನ್ನು ಸನ್ಮಾನಿಸಲಾಯಿತು.
ಸುಲೋಚನಾ ಅವರನ್ನು ಅಭಿನಂದಿಸಿ ಮಾತನಾಡಿದ ಘಟಕದ ಪದಾಧಿಕಾರಿ ಡಾ. ಮುರಲೀಮೋಹನ್ ಚೂಂತಾರು, ‘ಎಲೆ ಮರೆಯ ಸಾಧಕರನ್ನು ಗುರುತಿಸುವುದು, ಹಿರಿಯ ಸಾಹಿತಿಗಳನ್ನು ಇಂದಿನ ಯುವ ಜನರಿಗೆ ಪರಿಚಯಿಸಿ ಪ್ರೇರಣೆ ನೀಡುವುದು ಈ ಕಾರ್ಯಕ್ರಮದ ಉದ್ದೇಶ’ ಎಂದರು.
ಗೌರವ ಕಾರ್ಯದರ್ಶಿ ಗಣೇಶ್ ಪ್ರಸಾದ್ ಮಾತನಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಲೋಚನಾ, ‘ಕವಿ ಕಯ್ಯಾರರ ವಿದ್ಯಾರ್ಥಿಯಾಗಿದ್ದು, ಅವರ ಪ್ರೇರಣೆಯಿಂದ ಬರೆಯಲು ಆರಂಭಿಸಿದ್ದರೂ, ಶಿಕ್ಷಕ ವೃತ್ತಿಯಿಂದ ನಿವೃತ್ತಿಯ ಬಳಿಕವಷ್ಟೇ ಮೂರು ಕೃತಿಗಳನ್ನು ಹೊರ ತರಲು ಸಾಧ್ಯವಾಗಿದೆ. ಮನೆಯವರ, ಬಂಧುಗಳ ಸಹಕಾರ ಮತ್ತು ಮಂಗಳೂರಿನ ಸಾಹಿತ್ಯಿಕ ವಾತಾವರಣ ಹೆಚ್ಚಿನ ಖುಷಿ ನೀಡಿದೆ. ನನ್ನ ಸಾಹಿತ್ಯ ಸೇವೆಯನ್ನು ಗುರುತಿಸಿ ಮನೆಗೇ ಬಂದು ಸಮ್ಮಾನ ಮಾಡಿದ್ದು ಮನ ಮುಟ್ಟಿದೆ’ ಎಂದರು.
ಜಿಲ್ಲಾ ಸಮಿತಿಯ ಅರುಣಾ ನಾಗರಾಜ್, ಸನತ್ ಕುಮಾರ್ ಜೈನ್, ಘಟಕದ ರತ್ನಾವತಿ ಜೆ. ಬೈಕಾಡಿ , ಮೀನಾಕ್ಷಿ ರಾಮಚಂದ್ರ, ಗುರುಪ್ರಸಾದ್, ಸುಲೋಚನಾ ಅವರ ಪತಿ ಪುರುಷೋತ್ತಮ ರಾವ್, ಸೊಸೆ ಲತಾ ಎಸ್. ರಾವ್, ಮೊಮ್ಮಗಳು ಸಂಜನಾ, ಬಂಧುಗಳಾದ ಪ್ರೇಮಾ ಸೀತಾರಾಮ್, ನಿವೃತ್ತ ಶಿಕ್ಷಕಿ ರತ್ನಾವತಿ, ವಿದ್ಯಾ ಆರ್. ರಾವ್ ಇದ್ದರು.
ಕೋಶಾಧಿಕಾರಿ ಎನ್. ಸುಬ್ರಾಯ ಭಟ್ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.