ಬದಿಯಡ್ಕ: ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್.ವಿ. ಭಟ್ (72) ಭಾನುವಾರ ಹೃದಯಾಘಾತದಿಂದ ನಿಧನರಾದರು.
ಬದಿಯಡ್ಕದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು, ಕುಸಿದು ಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಅಂತ್ಯಕ್ರಿಯೆ ಸೋಮವಾರ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮೂಲತಃ ಹೊನ್ನಾವರದ ಸಾಲಕೋಡು ಗ್ರಾಮದ ಎಸ್.ವಿ. ಭಟ್ಟ ಅವರು, 1975ರಲ್ಲಿ ಕಾಸರಗೋಡಿಗೆ ಶಿಕ್ಷಕರಾಗಿ ಬಂದರು. ಕಾಸರಗೋಡು, ಕಾಞಂಗಾಡು, ಅಡೂರು, ಕಾರಡ್ಕ, ಮುಳ್ಳೇರಿಯದ ಶಾಲೆಗಳಲ್ಲಿ ಶಿಕ್ಷಕರಾಗಿ, ದೇಲಂಪಾಡಿ, ಬೆಳ್ಳೂರು ಶಾಲೆಗಳಲ್ಲಿ ಮುಖ್ಯ ಶಿಕ್ಷಕರಾಗಿ ಕೆಲಸ ನಿರ್ವಹಿಸಿದ್ದರು. ಬಳಿಕ ಕುಂಬಳೆ ಉಪ ಜಿಲ್ಲಾ ಸಹಾಯಕ ಶಿಕ್ಷಣಾಧಿಕಾರಿಯಾಗಿದ್ದರು.
2006ರಲ್ಲಿ ನಿವೃತ್ತರಾದ ಬಳಿಕ ಸಾಹಿತ್ಯ ಹಾಗೂ ಸಾಮಾಜಿಕ ಕೆಲಸಗಳಲ್ಲಿ ಸಕ್ರಿಯರಾಗಿದ್ದರು. ಕಾಸರಗೋಡಿನಲ್ಲಿ ಕನ್ನಡ ಭಾಷೆಯ ಉಳಿವು ಹಾಗೂ ಬೆಳವಣಿಗೆಗಾಗಿ ಹೋರಾಟ ನಡೆಸಿದ್ದರು.
ಕಸಾಪ ಕೇರಳ ಗಡಿನಾಡು ಘಟಕದಲ್ಲಿ ವಿವಿಧ ಜವಾಬ್ದಾರಿ ನಿರ್ವಹಿಸಿದ್ದ ಅವರು, ಸತತ ನಾಲ್ಕು ಅವಧಿಯಲ್ಲಿ ಅದರ ಅಧ್ಯಕ್ಷರಾಗಿದ್ದರು. ಮಕ್ಕಳ ಕ್ರಿಯಾಶೀಲತೆ ಹೆಚ್ಚಿಸಲು ಶಾಲೆಗಳಲ್ಲಿ ‘ವಿದ್ಯಾರಂಗ ಕಲಾವೇದಿಕೆ’ ಬೆಳೆಸಿದರು. ವಿವಿಧ ಶಾಲೆಗಳಲ್ಲಿ ‘ನಂದಾದೀಪ’, ‘ಶಾಲೆಗಳಲ್ಲಿ ಸಾಹಿತ್ಯ ಅಭಿಯಾನ’ ಕಾರ್ಯಕ್ರಮ ಸಂಘಟಿಸಿದ್ದರು. ಕೊಡ್ಲಮೊಗರು, ಮುಳ್ಳೇರಿಯ, ನೀರ್ಚಾಲು, ಬಾಯಾರು ಪ್ರದೇಶದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಿದ್ದರು. ಕಾಸರಗೋಡಿನ ಹವ್ಯಕ ಭಾರತಿ ಸೇವಾ ಟ್ರಸ್ಟ್, ಕೇರಳ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದಲ್ಲೂ ಸಕ್ರಿಯರಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.