ಸುಬ್ರಹ್ಮಣ್ಯ: ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡದೆ ಡೀಮ್ಡ್ ಅರಣ್ಯ ಜಮೀನಿನ ಜಂಟಿ ಸರ್ವೆಗೆ ಮುಂದಾಗಿರುವ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯು ಸರ್ವೆ ಇಲಾಖೆಯ ಅಧಿಕಾರಿಗಳ ಧೋರಣೆ ರೈತ ವಿರೋಧಿಯಾಗಿದೆ ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಹೇಳಿದರು.
ಸುಬ್ರಹ್ಮಣ್ಯದಲ್ಲಿ ಶುಕ್ರವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳಿಯಾಡಳಿತ ಮತ್ತು ಜನಪ್ರತಿನಿಧಿಗಳಿಗೆ ಮಾಹಿತಿ ನೀಡದೆ ಅಧಿಕಾರಿಗಳು ಸರ್ವೆ ನಡೆಸಲು ಸುತ್ತೋಲೆ ಹೊರಡಿಸಿರುವುದನ್ನು ವಿರೋಧಿಸುತ್ತೇವೆ. ಈ ರೀತಿಯ ಸರ್ವೆ ವ್ಯವಸ್ಥೆ ರೈತರಿಗೆ ಮಾರಕವಾಗಿದೆ. ತಕ್ಷಣ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಈ ವ್ಯವಸ್ಥೆಯನ್ನು ನಿಲ್ಲಿಸಬೇಕು ಎಂದರು.
ಪ್ಲಾಟಿಂಗ್ ಆಗದ ರೈತರ ಭೂಮಿಯನ್ನು ಪ್ಲಾಟಿಂಗ್ ಮಾಡಿಕೊಡಬೇಕು. ಹಲವು ವರ್ಷದಿಂದ ಕೃಷಿ ಮಾಡಿಕೊಂಡು ನಿವೇಶನ ಹೊಂದಿರುವ ರೈತರಿಗೆ ಹಕ್ಕು ಪತ್ರ ನೀಡಬೇಕು. ಡೀಮ್ಡ್ ಅರಣ್ಯ ಪ್ರದೇಶಲ್ಲಿರುವ ರೈತರಿಗೆ ತೊಂದರೆ ನೀಡುವ ಸಾಧ್ಯತೆ ದಟ್ಟವಾಗಿದೆ. ರೈತರಿಗೆ ತೊಂದರೆ ಅಗುವ ಈ ವ್ಯವಸ್ಥೆಯನ್ನು ನಾವು ವಿರೋಧಿಸುತ್ತೇವೆ ಎಂದು ಅವರು ಹೇಳಿದರು.
ಹೋರಾಟ ಅನಿವಾರ್ಯ: ಅಧಿಕಾರಿಗಳು ಕೃಷಿ ವಿರೋಧಿ ನೀತಿಯನ್ನು ಈ ರೀತಿಯಾಗಿ ಅಳವಡಿಸಿಕೊಳ್ಳುತ್ತಿದ್ದಾರೆ. ರೈತರಿಗೆ ತೊಂದರೆ ನೀಡಿ ಕೃಷಿ ಮಾಡದಂತೆ ಮಾಡುವ ವ್ಯವಸ್ಥೆ ಇದಾಗಿದೆ. ಜಿಲಾಡಳಿತ ಎಚ್ಚೆತ್ತುಕೊಂಡು ಸರ್ವೆ ನಿಲ್ಲಿಸಬೇಕು. ಶಾಸಕರು ಸೇರಿದಂತೆ ಜನಪ್ರತಿನಿಧಿಗಳನ್ನು ಸೇರಿಸಿಕೊಂಡು ಸರ್ವೆ ಮಾಡಬೇಕು. ಈ ಬಗ್ಗೆ ವಿಶೇಷ ಗ್ರಾಮ ಸಭೆ ಕರೆದು ಸಾರ್ವಜನಿಕರಿಗೆ ಮತ್ತು ಸ್ಥಳೀಯ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.
ಮೂಲಭೂತ ಸೌಕರ್ಯಗಳನ್ನು ಒದಗಿಸಲು ಡೀಮ್ಡ್ ಫಾರೆಸ್ಟ್ ಅನ್ನು ಕಾಯ್ದಿರಿಸಬೇಕು. ವ್ಯವಸ್ಥಿತವಾಗಿ ಸರ್ವೆ ಮಾಡಬೇಕು. ತಪ್ಪಿದರೆ ಈ ಯೋಜನೆ ವಿರುದ್ಧ ರೈತರೆಲ್ಲರನ್ನೂ ಸೇರಿಸಿಕೊಂಡು ವೇದಿಕೆ ವತಿಯಿಂದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ತಿಂಗಳೊಳಗೆ ಸರ್ವೆಗೆ ಸುತ್ತೋಲೆ: ಡೀಮ್ಡ್ ಫಾರೆಸ್ಟ್ ಜಮೀನುಗಳನ್ನು ಸಮೀಕ್ಷೆ ನಡೆಸಲು ಜಂಟಿ ಪರಿಶೀಲನಾ ತಂಡಗಳನ್ನು ರಚಿಸಿ ಗ್ರಾಮ ಮಟ್ಟದಲ್ಲಿ ಕ್ಷೇತ್ರ ಪರಿಶೀಲನೆ ನಡೆಸುವಂತೆ ನಿರ್ದೇಶನ ನೀಡಲಾಗಿದೆ. ತಾಲ್ಲೂಕು ಜಂಟಿ ಪರಿಶೀಲನಾ ಸಮಿತಿ ರಚಿಸಿ ಡೀಮ್ಸ್ ಫಾರೆಸ್ಟ್ ಜಮೀನುಗಳನ್ನು ಸಮೀಕ್ಷೆ ನಡೆಸಲು ಜಂಟಿ ಪರಿಶೀಲನಾ ತಂಡಗಳನ್ನು ರಚಿಸಿ ಗ್ರಾಮ ಮಟ್ಟದಲ್ಲಿ ಕ್ಷೇತ್ರ ಪರಿಶೀಲನೆಯನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ಸೆ.20ರಿಂದ ಅ. 21ರೊಳಗೆ ವಾಸ್ತವ್ಯದ ಮನೆ, ಕೃಷಿ, ಸಾರ್ವಜನಿಕ ಕಟ್ಟಡಗಳಿರುವ ಬಗ್ಗೆ, ಸಾರ್ವಜನಿಕ ಉದ್ದೇಶಗಳಿಗೆ ಜಮೀನು ಕಾದಿರಿಸುವ ಮತ್ತು ಸಾರ್ವಜನಿಕ ಉದ್ದೇಶಕ್ಕೆ ಕಾಯ್ದಿರಿಸಲು ಲಭ್ಯವಿರುವ ಜಮೀನುಗಳ ವಾಸ್ತವದ ಸ್ಥಿತಿಗತಿಯ ಬಗ್ಗೆ ನಕ್ಷೆಯಲ್ಲಿ ಗುರುತಿಸಿ ವರದಿ ನೀಡಲು ಸೂಚಿಸಲಾಗಿದೆ ಎಂದು ಸುತ್ತೋಲೆ ಹೊರಡಿಸಲಾಗಿದೆ ಎಂದು ಕಿಶೋರ್ ಹೇಳಿದರು.
ಗ್ರಾ.ಪಂ.ಸದಸ್ಯರಾದ ಗಿರೀಶ್ ಆಚಾರ್ಯ ಪೈಲಾಜೆ, ದಿಲೀಪ್ ಉಪ್ಪಳಿಕೆ, ಮಲೆನಾಡು ಜನಹಿತ ರಕ್ಷಣಾ ವೇದಿಕೆ ಪ್ರಮುಖರಾದ ಜಯಪ್ರಕಾಶ್ ಕೂಜುಗೋಡು, ರಮಾನಂದ ಎಣ್ಣೆಮಜಲು, ಮನೀಶ್ ಪದೇಲ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.