ಸುಬ್ರಹ್ಮಣ್ಯ: ಲಾಕ್ಡೌನ್ನಿಂದಾಗಿ ಭಕ್ತರು ದೇವಸ್ಥಾನಕ್ಕೆ ಬಾರದ ಕಾರಣ, ದಕ್ಷಿಣೆ ಹಾಗೂ ಸೇವೆಗಳಿಗೆ ಅವಕಾಶ ಇಲ್ಲದಂತಾಗಿದೆ. ದೇವಸ್ಥಾನಗಳಲ್ಲಿ ಸೇವೆಗಳು ಪೂರ್ಣ ಪ್ರಮಾಣದಲ್ಲಿ ಆರಂಭಗೊಳ್ಳುವ ತನಕ ದಕ್ಷಿಣೆ ಮತ್ತು ಸೇವಾ ಭತ್ಯೆ ನೀಡಬೇಕು ಎಂದು ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಕೋವಿಡ್ ಲಾಕ್ಡೌನ್ನಿಂದಾಗಿ ದೇವಸ್ಥಾನಗಳು ಬಂದ್ ಆಗಿವೆ. ಸೇವೆಗಳು ನಡೆಯುತ್ತಿಲ್ಲ. ನಮ್ಮಲ್ಲಿ ಅರ್ಚಕರಿಗೆ ತಿಂಗಳಿಗೆ ₹96 ಮಾತ್ರ ವೇತನ ಸಿಗುತ್ತಿದೆ. ಸೇವಾ ದಕ್ಷಿಣೆ ಹಾಗೂ ಸೇವಾ ಭತ್ಯೆಗಳು ಸಿಗುತ್ತಿಲ್ಲ. ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಕಟೀಲು ದುರ್ಗಾಪರಮೇಶ್ವರಿ ಮತ್ತಿತರ ದೇವಸ್ಥಾನಗಳ ಅರ್ಚಕರಿಗೆ ಲಾಕ್ಡೌನ್ ಅವಧಿಯಲ್ಲಿ ಸೇವಾ ದಕ್ಷಿಣೆ ಮತ್ತು ಸೇವಾ ಭತ್ಯೆ ನೀಡಿದ್ದು, ನಾವು ವಂಚಿತರಾಗಿದ್ದೇವೆ. ಹೀಗಾಗಿ, ಪರಿಸ್ಥಿತಿಯು ಹಿಂದಿನಂತೆ ಆಗುವ ತನಕದ ಅವಧಿಯಲ್ಲಿ ದಕ್ಷಿಣೆ ಮತ್ತು ಸೇವಾ ಭತ್ಯೆಯನ್ನು ಅರ್ಚಕರಿಗೆ ನೀಡಬೇಕು ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕರು, ಸಹಾಯಕರು, ಪರಿಚಾರಕರು ಸೇರಿದಂತೆ 15 ಮಂದಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.