ADVERTISEMENT

ಕುಕ್ಕೆ: ನೌಕಾವಿಹಾರ ಹಾಗೂ ವಿಜ್ರಂಭಣೆಯ ಅವಭೃತೋತ್ಸವ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2019, 12:07 IST
Last Updated 4 ಡಿಸೆಂಬರ್ 2019, 12:07 IST
ಕುಮಾರಧಾರ ನದಿಯ ಜಳಕದ ಗುಂಡಿಯಲ್ಲಿ ವೈದಿಕ ವಿದಿವಿಧಾನಗಳೊಂದಿಗೆ ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯ ಅವಭೃತೋತ್ಸವ ನೆರವೇರಿಸಿದರು.
ಕುಮಾರಧಾರ ನದಿಯ ಜಳಕದ ಗುಂಡಿಯಲ್ಲಿ ವೈದಿಕ ವಿದಿವಿಧಾನಗಳೊಂದಿಗೆ ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯ ಅವಭೃತೋತ್ಸವ ನೆರವೇರಿಸಿದರು.   

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದಲ್ಲಿ ಚಂಪಾ ಷಷ್ಠಿ ಮಹೋತ್ಸವದ ಪ್ರಯುಕ್ತ ಮಾರ್ಗಶಿರ ಶುದ್ಧ ಸಪ್ತಮಿಯ ಮಂಗಳವಾರ ಬೆಳಿಗ್ಗೆ ಕುಮಾರಾಧಾರಾ ನದಿಯಲ್ಲಿ ದೇವರಿಗೆ ನೌಕಾವಿಹಾರ ಹಾಗೂ ಅವಭೃತೋತ್ಸವ ನಡೆಯಿತು.

ದೇವಸ್ಥಾನದಿಂದ ಬಂಡಿ ರಥದಲ್ಲಿ ಉತ್ಸವಮೂರ್ತಿಯ ಅವಭತೋತ್ಸವ ಸವಾರಿ ಹೊರಟಿತು. ಬಿಲದ್ವಾರದ ಕಟ್ಟೆಯಲ್ಲಿ ಪೂಜೆ ನಡೆಸಲಾಯಿತು. ಕುಮಾರಾಧಾರಾ ನದಿಯಲ್ಲಿ ಸಿಂಗರಿಸಿದ ತೆಪ್ಪದಲ್ಲಿ ವಿಜೃಂಭಣೆಯ ನೌಕಾ ವಿಹಾರ ನಡೆಯಿತು. ಬಳಿಕ ಅವಭತೋತ್ಸವ ನಡೆಯಿತು.

ದೇವಸ್ಥಾನದ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯ ಹಿರಿತನದಲ್ಲಿ ಅರ್ಚಕ ವಂದದವರು ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು. ಜಳಕದ ಬಳಿಕ ಕುಮಾರಧಾರ ನದಿತೀರದ ಅವಭೃತಕಟ್ಟೆಯಲ್ಲಿ ದೇವರಿಗೆ ವಿಶೇಷ ಕಟ್ಟೆಪೂಜೆ ನಡೆಯಿತು. ಸಹಸ್ರ ಮಂದಿ ಭಕ್ತರು ಭಕ್ತಿ, ಶ್ರದ್ಧೆಯಿಂದ ದೇವರೊಂದಿಗೆ ಕುಮಾರಧಾರ ನದಿಯಲ್ಲಿ ಅವಭೃತ ಸ್ನಾನ ಮಾಡಿದರು.

ADVERTISEMENT

ಶ್ರೀ ಕ್ಷೇತ್ರದ ಆನೆ ‘ಯಶಸ್ವಿ’ಯು ನದಿ ನೀರಿನಲ್ಲಿ ಜಲಕ್ರೀಡೆಯಾಡಿ ಸಂಭ್ರಮಿಸಿತು. ದೇವರ ಅವಭತೋತ್ಸವದ ಬಳಿಕ ಕುಮಾರಾಧಾರಾದಿಂದ ದೇಗುಲದವರೆಗೆ ವ್ಯಾಪಾರಸ್ಥರು ಮತ್ತು ಮನೆ ನಿವಾಸಿಗಳು ಫಲಪುಷ್ಪ ಆರತಿ ಬೆಳಗಿ ದೇವರಿಗೆ ಸೇವೆ ಸಲ್ಲಿಸಿದರು.

ಉಪವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪೆರಾಲು, ಬ್ರಹ್ಮರಥ ದಾನ ಮಾಡಿದ ಅಜಿತ್ ಶೆಟ್ಟಿ ಕಡಬ, ವ್ಯವಸ್ಥಾಪನ ಸಮಿತಿ ಸದಸ್ಯರು, ದೇವಸ್ಥಾನದ ಸಿಬ್ಬಂದಿ, ಭಕ್ತರು ಉಪಸ್ಥಿತರಿದ್ದರು.

ಮಧ್ಯಾಹ್ನ ಸಹಸ್ರಾರು ಮಂದಿ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.

9ರಂದು ನೀರಿನಲ್ಲಿ ಬಂಡಿ ಉತ್ಸವ: ಇದೇ ರಂದು ಕೊಪ್ಪರಿಗೆ ಇಳಿಯುವುದರೊಂದಿಗೆ ವಾರ್ಷಿಕ ಚಂಪಾಷಷ್ಠಿ ಜಾತ್ರೆ ಮುಕ್ತಾಯಗೊಳ್ಳಲಿದೆ. ಈ ದಿನ ರಾತ್ರಿ ದೇವಳದ ಹೊರಾಂಗಣದಲ್ಲಿ ನೀರಿನಲ್ಲಿ ಬಂಡಿ ಉತ್ಸವ ನಡೆಯಲಿದೆ. ಗೋಪುರ ನಡಾವಳಿ ನೆರವೇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.