ಮಂಗಳೂರು: ಕೂಳೂರು ಹೊಸಬೆಟ್ಟು ಹೊನ್ನಕಟ್ಟೆ ಪ್ರದೇಶದಲ್ಲಿ ಸರ್ವೆ ನಂಬ್ 110/13ರಲ್ಲಿ ನೂರಾರು ವರ್ಷಗಳಿಂದ ವಾಸಿಸುತ್ತಿರುವ 60ಕ್ಕೂ ಅಧಿಕ ಕುಟುಂಬಗಳು ರಸ್ತೆ, ಒಳಚರಂಡಿ ಸೌಕರ್ಯಗಳಿಲ್ಲದೇ ಸಮಸ್ಯೆ ಎದುರಿಸುತ್ತಿವೆ. ರಸ್ತೆ ನಿರ್ಮಿಸಿಕೊಡುವಂತೆ ಹೈಕೋರ್ಟ್ ಹಾಗೂ ಜಿಲ್ಲಾಧಿಕಾರಿ ಆದೇಶ ಮಾಡಿದರೂ ಪಾಲಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಅದಕ್ಕೆ ಕವಡೆ ಕಾಸಿನ ಕಿಮ್ಮತ್ತೂ ನೀಡುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ವಿಶ್ವನಾಥ ಜೆ, ‘ ಕುಳಾಯಿಯ ಗ್ರಾಮ ಸಂಘವು ಸಾರ್ವಜನಿಕ ದಾರಿಯನ್ನು ಮುಚ್ಚಿದೆ. 2010ರಿಂದಲೂ ದಾರಿಗಾಗಿ ಹೋರಾಟ ನಡೆಯುತ್ತಿದೆ. ಸ್ಥಳದಲ್ಲಿರುವ ಸಾರ್ವಜನಿಕ ಬಾವಿ ಮುಚ್ಚಲು ಹಾಗೂ ಕಲ್ಯಾಣ ಮಂಟಪ ನಿರ್ಮಿಸಲು ಮುಂದಾದಾಗ 60 ಮನೆಯವರೆಲ್ಲ ಸೇರಿ ಆಕ್ಷೇಪ ಸಲ್ಲಿಸಿದ್ದೆವು.ಸ್ಥಳೀಯ ನಿವಾಸಿಗಳ ಪರವಾಗಿ ಹೈಕೋರ್ಟ್ ನಾಲ್ಕು ಸಲ ಆದೇಶ ನೀಡಿದೆ. ಜಿಲ್ಲಾಧಿಕಾರಿಯವರೂ ಇಲ್ಲಿನ 38 ಸೆಂಟ್ಸ್ ಸರ್ಕಾರಿ ಜಾಗದಲ್ಲಿ 13 ಸೆಂಟ್ಸ್ ಜಾಗ ಬಳಸಿ ರಸ್ತೆ ನಿರ್ಮಿಸುವಂತೆ ಸೂಚಿಸಿದ್ದಾರೆ. ಆದರೆ, ಸ್ಥಳೀಯ ಅಧಿಕಾರಿಗಳು ಈ ಆದೇಶವನ್ನು ಪಾಲಿಸುತ್ತಿಲ್ಲ. ಪಾಲಿಕೆ ಸದಸ್ಯರು, ಶಾಸಕರು ಇದಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ’ ಎಂದರು.
ಮಧುಸೂದನ ಉರ್ವಸ್ಟೋರ್, ‘ಇಲ್ಲಿನ ಮನೆಗಳಿಗೆ ಒಳಚರಂಡಿ ಸಂಪರ್ಕ ಇಲ್ಲ. ತುಂಬಿದ ಶೌಚ ಗುಂಡಿ ಸ್ವಚ್ಛಗೊಳಿಸಲು ಸ್ಥಳಕ್ಕೆ ವಾಹನ ತರಿಸುವುದಕ್ಕೂ ವ್ಯವಸ್ಥೆ ಇಲ್ಲ’ ಎಂದು ಅಳಲು ತೋಡಿಕೊಂಡರು.
ಸ್ಥಳೀಯರ ಹೋರಾಟಕ್ಕೆ ಬೆಂಬಲ ಸೂಚಿಸಿರುವ ಹಿಂದೂ ಮಹಾಸಭಾ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ, ‘ಮೂಲಸೌಕರ್ಯ ಪಡೆಯಲು ಹೊನ್ನಕಟ್ಟೆ ನಿವಾಸಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಷ್ಟೊಂದು ಹೋರಾಟ ನಡೆಸಬೇಕಾಗಿರುವುದು ವಿಪರ್ಯಾಸ. 15 ದಿನಗಳ ಒಳಗೆ ರಸ್ತೆ ನಿರ್ಮಿಸಿಕೊಡದಿದ್ದರೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಿದ್ದೇವೆ. ಪಾಲಿಕೆ ಕೇಂದ್ರ ಕಚೇರಿ ಮುಂದೆ ಧರಣಿ ನಡೆಸಲಿದ್ದೇವೆ’ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಹೊನ್ನಕಟ್ಟೆ ನಿವಾಸಿಗಳಾದ ಪೂವಪ್ಪ ದೇವಾಡಿಗ, ಸತೀಶ್ ಅಮೀನ್, ಗಣೇಶ ದೇವಾಡಿಗ, ಶೇಖರ ದೇವಾಡಿಗ, ಪದ್ಮನಾಭ ದೇವಾಡಿಗ, ದಿನೇಶ್ ದೇವಾಡಿಗ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.