ಮಂಗಳೂರು: ಪ್ರಮುಖ 29 ಕಾರ್ಮಿಕ ಕಾನೂನುಗಳನ್ನು ನಾಲ್ಕು ಸಂಹಿತೆಗಳಾಗಿ ರೂಪಿಸುವ ಕೇಂದ್ರ ಸರ್ಕಾರದ ನೀತಿ ವಿರೋಧಿಸಿ ಸಿಐಟಿಯು ನೇತೃತ್ವದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳು ಬುಧವಾರ ಇಲ್ಲಿ ಪ್ರತಿಭಟನೆ ನಡೆಸಿದವು.
ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಕ್ಲಾಕ್ ಟವರ್ವರೆಗೆ ಮೆರವಣಿಗೆ ನಡೆಸಿದ ಕಾರ್ಮಿಕರು, ಕೇಂದ್ರ ಸರ್ಕಾರದ ಕಾರ್ಪೊರೇಟ್ ಪರ ನೀತಿ ವಿರುದ್ಧ ಘೋಷಣೆ ಕೂಗಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ಕುಮಾರ್ ಬಜಾಲ್ ಮಾತನಾಡಿ, ಕೇಂದ್ರ ಸರ್ಕಾರ ಕಾರ್ಪೊರೇಟ್ ಕಂಪನಿಗಳ ಹಿತಾಸಕ್ತಿ ಕಾಪಾಡುತ್ತಿದೆಯೇ ಹೊರತು, ಕಾರ್ಮಿಕ ವರ್ಗದವರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ. ಕಾರ್ಮಿಕ ಕಾನೂನುಗಳನ್ನು ನಿಷ್ಕ್ರಿಯಗೊಳಿಸಿ ಕಾರ್ಮಿಕ ವರ್ಗವನ್ನು ಮತ್ತೆ ಜೀತದಾಳುಗಳನ್ನಾಗಿಸುವ ಹುನ್ನಾರ ನಡೆಯುತ್ತಿದೆ. ಕೆಲಸದ ಅವಧಿ ಹೆಚ್ಚಿಸುವ ಮೂಲಕ ಬಂಡವಾಳಶಾಹಿಗಳನ್ನು ಬಲಗೊಳಿಸಲು ಸರ್ಕಾರ ಮುಂದಾಗಿದೆ’ ಎಂದರು.
ಬ್ಯಾಂಕ್ ನೌಕರರ ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಫಣೀಂದ್ರ ಕೆ. ಮಾತನಾಡಿ,‘ಕೇಂದ್ರದ ಎನ್ಡಿಎ ಆಡಳಿತದಲ್ಲಿ ಅಚ್ಛೇ ದಿನ್ ಬಂಡವಾಳಶಾಹಿಗಳಿಗೆ ಬಂದಿದೆ. ದೇಶದಲ್ಲಿ ಬಡತನ ಹೆಚ್ಚಾಗಿದೆ. ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದ ಸರ್ಕಾರ, ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿದೆ. ದೇಶದ ವಿಮೆ, ಬ್ಯಾಂಕ್ ಸೇರಿದಂತೆ ಎಲ್ಲ ಆರ್ಥಿಕ ಕ್ಷೇತ್ರಗಳನ್ನು ವಿಲೀನ, ಖಾಸಗೀಕರಣ ಮಾಡಲು ಹೊರಟಿರುವ ಸರ್ಕಾರದ ನಡೆ ಖಂಡನೀಯ’ ಎಂದರು.
ಸಿಐಟಿಯು ಮುಖಂಡ ವಸಂತ ಆಚಾರಿ ಮಾತನಾಡಿ, ‘ಕಟ್ಟಡ ಕಾರ್ಮಿಕರಿಗೆ ಕೆಲಸ ಇಲ್ಲದಾಗಿದೆ. ಕೆಂಪುಕಲ್ಲು, ಮರಳು ಸಿಗುತ್ತಿಲ್ಲ. ಕಾರ್ಮಿಕರು ಬೀದಿ ಪಾಲಾಗುತ್ತಿದ್ದಾರೆ. ಕರಾವಳಿಗೆ ವಿಶೇಷ ಮರಳು ನೀತಿ ಜಾರಿಗೊಳಿಸಬೇಕು. ಕಾರ್ಮಿಕ ಕಾನೂನು ರದ್ದಾದರೆ, ಬೀಡಿ ಸುತ್ತುವವರು, ಬಿಸಿಯೂಟ ನೌಕರರು ಸೇರಿದಂತೆ ಎಲ್ಲ ಕಾರ್ಮಿಕರು ತೊಂದರೆಗೆ ಸಿಲುಕುತ್ತಾರೆ’ ಎಂದರು.
ಸಂಘಟನೆ ಪ್ರಮುಖರಾದ ಸೀತಾರಾಮ ಬೆರಿಂಜ, ಬಾಲಕೃಷ್ಣ ಶೆಟ್ಟಿ, ಯಾದವ ಶೆಟ್ಟಿ, ಸನ್ನಿ ಡಿಸೋಜ, ವಿನ್ಸೆಂಟ್ ಡಿಸೋಜ, ಸುನಿಲ್ ಪದಕಣ್ಣಾಯ, ಲೋಕೇಶ್ ಶೆಟ್ಟಿ, ಬಿ.ಕೆ ಇಮ್ತಿಯಾಜ್, ಸಂತೋಷ್ ಬಜಾಲ್, ನವೀನ್ ಕೊಂಚಾಡಿ, ತಯ್ಯುಬ್ ಬೆಂಗ್ರೆ, ಜಯಂತಿ ಶೆಟ್ಟಿ, ಭಾರತಿ ಬೋಳಾರ, ಅಸುಂತ ಡಿಸೋಜ ಇದ್ದರು.
ಮುಷ್ಕರಕ್ಕೆ ಬೆಂಬಲ ನೀಡಿದ ಹಳೆ ಬಂದರು ಕಾರ್ಮಿಕರು
ಹಳೆ ಬಂದರಿನ ಕಾರ್ಮಿಕರು ಬುಧವಾರ ದೈನಂದಿನ ಕೆಲಸ ಸ್ಥಗಿತಗೊಳಿಸಿ, ಅಖಿಲ ಭಾರತ ಕಾರ್ಮಿಕ ಮುಷ್ಕರಕ್ಕೆ ಬೆಂಬಲ ಸೂಚಿಸಿದರು.
ಹಳೆ ಬಂದರಿನ ಕಿರಾಣಿ, ಅಡಿಕೆ, ಒಣಮೀನು, ಟ್ರಾನ್ಸ್ ಪೋರ್ಟ್ ವಿಭಾಗದ ಕಾರ್ಮಿಕರು, ಸರಕು ಸಾಗಣೆ ಲಾರಿ ಚಾಲಕರು ಸೇರಿದಂತೆ ಸಾವಿರಕ್ಕೂ ಅಧಿಕ ಕಾರ್ಮಿಕರು ಮುಷ್ಕರದಲ್ಲಿ ಭಾಗವಹಿಸಿದರು.
ಪೋರ್ಟ್ ರಸ್ತೆ, ಜೆ.ಎಂ. ರಸ್ತೆ, ಚೇಂಬರ್ ರಸ್ತೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಮೆರವಣಿಗೆ ನಡೆಸಿದರು.
ಬಂದರು ಶ್ರಮಿಕರ ಸಂಘದ ಅಧ್ಯಕ್ಷರಾದ ಬಿ.ಕೆ. ಇಮ್ತಿ ಯಾಜ್, ಫಾರೂಕ್ ಉಳ್ಳಾಲಬೈಲ್, ಲೋಕೇಶ್ ಶೆಟ್ಟಿ, ಮಜೀದ್ ಉಳ್ಳಾಲ, ಮೋಹನ, ಹರೀಶ್ ಕೆರೆಬೈಲ್, ಸಿದ್ದಿಕ್ ಬೆಂಗ್ರೆ, ಕಾಜ ಮೊಹಿಯುದ್ದೀನ್, ಪದ್ಮನಾಭ, ಪ್ರಭಾಕರ, ಸಿರಾಜ್, ಇಕ್ಬಾಲ್, ಬಸವ, ಅಬ್ದುಲ್ ಖಾದರ್ ಬಜಾಲ್, ಅಬ್ಬಾಸ್ ಇದ್ದರು.
ಅಕ್ಷರ ದಾಸೋಹ ನೌಕರರ ಪ್ರತಿಭಟನೆ
ಪುತ್ತೂರು: ಕಾಯ್ದೆ ತಿದ್ದುಪಡಿ ಮಾಡಿದರೆ, ನಮ್ಮ ಹಕ್ಕುಗಳಿಗೆ ಕೈ ಹಾಕಿದರೆ ಸರ್ಕಾರದ ಕುರ್ಚಿಯನ್ನು ರಸ್ತೆಗೆ ಎಸೆಯುವ ತಾಕತ್ತು ನಮಗಿದೆ. ಚುನಾವಣೆಯಲ್ಲಿ ಸೋತಿರಬಹುದು, ಆದರೆ, ಕೆಂಬಾವುಟ ಹಿಡಿದು ಮಾಡಿರುವ ಹೋರಾಟಗಳಿಗೆ ಸೋಲಾಗಿಲ್ಲ ಎಂದು ಸಿಐಟಿಯು ಕಾರ್ಮಿಕ ಸಂಘಟನೆಯ ನಾಯಕಿ ಈಶ್ವರಿ ಶಂಕರ್ ಹೇಳಿದರು.
ಪುತ್ತೂರು ಉಪವಿಭಾಗಾಧಿಕಾರಿ ಕಚೇರಿ ಮುಂಭಾಗ ಬುಧವಾರ ದುಡಿಯುವ ವರ್ಗದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಅಂಗವಾಗಿ ಸಿಐಟಿಯು ಬೆಂಬಲಿತ ಅಕ್ಷರದಾಸೋಹ ನೌಕರರ ಸಂಘದ ವತಿಯಿಂದ ವಿವಿಧ ಬೇಡಿಕೆ ಮುಂದಿಟ್ಟುಕೊಂಡು ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಮುಖಂಡ ಶ್ಯಾಮರಾಜ್ ಪಟ್ರಮೆ ಮಾತನಾಡಿದರು.
ಡಿವೈಎಫ್ಐ ಮುಖಂಡ ಅಭಿಷೇಕ್, ಅಕ್ಷರ ದಾಸೋಹ ನೌಕರರ ಸಂಘದ ಪುತ್ತೂರು ಘಟಕದ ಅಧ್ಯಕ್ಷೆ ರಂಜಿತಾ, ಪ್ರಧಾನ ಕಾರ್ಯದರ್ಶಿ ಲತಾ, ಖಜಾಂಜಿ ತೆರೆಸಾ, ಕಡಬ ಸಂಘದ ಅಧ್ಯಕ್ಷೆ ರೇವತಿ, ಪ್ರಧಾನ ಕಾರ್ಯದರ್ಶಿ ಸುಲೋಚನಾ, ಖಜಾಂಜಿ ಹೇಮಲತಾ, ಪ್ರಮುಖರಾದ ವೇದ, ಸುಧಾ, ಲೀಲಾವತಿ, ಸುಳ್ಯ ಸಂಘದ ಅಧ್ಯಕ್ಷೆ ವಿಜಯಲಕ್ಷ್ಮಿ, ಕಾರ್ಯದರ್ಶಿ ಭವ್ಯ, ಪ್ರಮುಖರಾದ ಸಾವಿತ್ರಿ, ಜನಾರ್ದನ ಪುತ್ತೂರು, ದಾಮೋದರ ಭಾಗವಹಿಸಿದ್ದರು.
ವಿವಿಧ ಬೇಡಿಕೆ ಒಳಗೊಂಡ ಮನವಿಯನ್ನು ಉಪವಿಭಾಗಾಧಿಕಾರಿ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.
ಸುರತ್ಕಲ್: ಎಂಆರ್ಪಿಎಲ್ ಕಾರ್ಮಿಕರಿಂದ ಪ್ರತಿಭಟನೆ
ಮೂಲ್ಕಿ: ಪಿಜಿಡಬ್ಲ್ಯುಎಫ್ಐ ಸಂಘಟನೆಯು ದೇಶವ್ಯಾಪಿ ಪೆಟ್ರೋಲಿಯಂ ಸೆಕ್ಟರ್ಗಳಲ್ಲಿ ಮುಷ್ಕರಕ್ಕೆ ಕರೆ ಕೊಟ್ಟಿದ್ದರಿಂದ ಬುಧವಾರ ಎಂಆರ್ಪಿಎಲ್ ಮುಖ್ಯ ದ್ವಾರದಲ್ಲಿ ಎಂಆರ್ಪಿಎಲ್ ಕರ್ಮಚಾರಿ ಸಂಘ ಮತ್ತು ಎಂಪ್ಲಾಯಿಸ್ ಯೂನಿಯನ್, ಪೆಟ್ರೋಲಿಯಂ ಗ್ಯಾಸ್ ವರ್ಕರ್ಸ್ ಫೆಡರೇಷನ್ ಅಫ್ ಇಂಡಿಯದ ಕಾರ್ಮಿಕರು ಮುಷ್ಕರ ನಡೆಸಿದರು.
ಎಂಆರ್ಪಿಎಲ್ ಎಂಪ್ಲಾಯಿಸ್ ಯೂನಿಯನ್ ಅಧ್ಯಕ್ಷ ಶರತ್ ಜೋಗಿ ಮಾತನಾಡಿದರು.
ಬೇಡಿಕೆಗೆ ಸ್ಪಂದಿಸದೆ ಇದ್ದರೆ ಹೋರಾಟದ ಎಚ್ಚರಿಕೆಯನ್ನು ನೀಡಲಾಯಿತು.
ಪೆರ್ಮುದೆ ಗ್ರಾಮದ ಕಾರಣಿಕ ದೈವ ಪಿಲಿಚಾಮುಂಡಿಗೆ ಕಾರ್ಮಿಕರು ಪ್ರಾರ್ಥನೆ ಸಲ್ಲಿಸಿ, ಪ್ರತಿಭಟನೆ ಆರಂಭಿಸಿದರು.
ಯೂನಿಯನ್ನ ಪ್ರಧಾನ ಕಾರ್ಯದರ್ಶಿ ಸಾಯಿಪೃಥ್ವಿ, ಕರ್ಮಚಾರಿ ಸಂಘದ ಅಧ್ಯಕ್ಷ ಪ್ರಸಾದ್ ಅಂಚನ್, ಪ್ರಮುಖರಾದ ಸುರೇಶ್ ಪೊಸ್ರಾಲ್, ಸುರೇಂದ್ರ ಭಟ್, ಸುನಿಲ್ ಬೋಳ, ಸುರೇಶ್ ಪೂಜಾರಿ ಕೃಷ್ಣಾಪುರ, ಪುರುಷೋತ್ತಮ, ಎಸ್.ಸಿ. ವಿಭಾಗದ ಅಧ್ಯಕ್ಷ ಸಂತೋಷ್, ಎಂಪ್ಲಾಯಿಸ್ ಯೂನಿಯನ್ ಪದಾ ಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.