ಪುತ್ತೂರು: ಪೇಟೆಯ ರಾಜಕಾಲುವೆ ಸಹಿತ ಹಲವು ಉಪತೋಡುಗಳ ಮಳೆ ನೀರು ಹರಿದು ಹೋಗುವ ಬೆದ್ರಾಳ ತೋಡಿಗೆ ಶನಿವಾರ ನಸುಕಿನ ವೇಳೆ ಗುಡ್ಡ ಕುಸಿದು ಪಕ್ಕದ ಅಡಿಕೆ ತೋಟಗಳು ಜಲಾವೃತಗೊಂಡಿವೆ.
ಪಕ್ಕದಲ್ಲಿರುವ ಮನೆಯೊಂದು ಅಪಾಯದ ಅಂಚಿಗೆ ತಲುಪಿದೆ.
ಕೆಮ್ಮಿಂಜೆ ಗ್ರಾಮದ ಪುತ್ತೂರಮೂಲೆ ಮತ್ತು ಕೆಮ್ಮಿಂಜೆ ಬೈಲು ಎಂಬಲ್ಲಿ ಬೆದ್ರಾಳ ತೋಡಿಗೆ ಮಣ್ಣು ಕುಸಿದು ಮಳೆ ನೀರು ಹರಿಯಲು ಅಡ್ಡಿಯಾಗಿದೆ. ತೋಡಿನ ನೀರು ಪಕ್ಕದಲ್ಲಿರುವ ಅಡಿಕೆ ತೋಟಗಳಿಗೆ ನುಗ್ಗಿದೆ. ಸುಬ್ರಹ್ಮಣ್ಯ ಬಳ್ಳಕ್ಕುರಾಯ, ಎಂಜಿನಿಯರ್ ಸಚಿನ್, ಮುತ್ತು ಶೆಟ್ಟಿ ಅವರ ತೋಟಗಳು ಜಲಾವೃತಗೊಂಡಿವೆ. ತೋಡಿನ ಬದಿಯಲ್ಲಿರುವ ಯಶೋಧರ ಎಂಬುವರ ಮನೆಯೂ ಅಪಾಯದ ಅಂಚಿಗೆ ತಲುಪಿದೆ.
ಬೆದ್ರಾಳ ತೋಡು ಮುಚ್ಚಿಹೋಗಿದ್ದು, ನೀರು ತನ್ನ ದಿಕ್ಕು ಬದಾಯಿಸಿ ಪಕ್ಕದ ತೋಟಗಳಿಗೆ ನುಗ್ಗಿದೆ. ತೋಡಿಗೆ ಕುಸಿದು ಬಿದ್ದಿರುವ ಮಣ್ಣು ತೆರವು ಮಾಡಲು ಜೆಸಿಬಿ ಹೋಗಲು ದಾರಿಯೂ ಇಲ್ಲದೆ ಸಮಸ್ಯೆಯಾಗಿದೆ. ಸ್ಥಳಕ್ಕೆ ನಗರಸಭೆ ಸದಸ್ಯ ಬಾಲಚಂದ್ರ, ಪೌರಾಯುಕ್ತ ಮಧು ಎಸ್.ಮನೋಹರ್ ಮತ್ತು ನಗರಸಭೆ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.