ADVERTISEMENT

ದೋಣಿಗಲ್ ಸಮೀಪ ಹೆದ್ದಾರಿ ಕುಸಿತ: ಸರಕು ಸಾಗಣೆ ಲಾರಿಗಳಿಗೆ ಗುಂಡ್ಯದಲ್ಲಿ ತಡೆ

ಶಿರಾಡಿ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2021, 2:30 IST
Last Updated 20 ಆಗಸ್ಟ್ 2021, 2:30 IST
ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿ ರಸ್ತೆಯಲ್ಲಿ ಸರಕು ಸಾಗಣೆ ಲಾರಿಗಳ ಸಂಚಾರ ನಿರ್ಬಂಧ ಹೇರಿರುವುದರಿಂದಾಗಿ ಗುಂಡ್ಯದಲ್ಲಿ ಲಾರಿಗಳು ಸಾಲಾಗಿ ನಿಂತಿರುವುದು
ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿ ರಸ್ತೆಯಲ್ಲಿ ಸರಕು ಸಾಗಣೆ ಲಾರಿಗಳ ಸಂಚಾರ ನಿರ್ಬಂಧ ಹೇರಿರುವುದರಿಂದಾಗಿ ಗುಂಡ್ಯದಲ್ಲಿ ಲಾರಿಗಳು ಸಾಲಾಗಿ ನಿಂತಿರುವುದು   

ಶಿರಾಡಿ (ಉಪ್ಪಿನಂಗಡಿ): ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಕಲೇಶಪುರ ತಾಲ್ಲೂಕಿನ ದೋಣಿಗಲ್ ಸಮೀಪ ಹೆದ್ದಾರಿ ಕುಸಿತಗೊಂಡಿರುವ ಕಾರಣ ದಿಂದ ಶಿರಾಡಿ ಘಾಟಿಯಲ್ಲಿ ಭಾರಿ ವಾಹನ ಗಳ ಸಂಚಾರಕ್ಕೆ ಹಾಸನ ಜಿಲ್ಲಾಧಿಕಾರಿ ನಿರ್ಬಂಧ ಹೇರಿದ್ದಾರೆ. ಹೀಗಾಗಿ, 4 ದಿನಗಳಿಂದ ಸರಕು ಸಾಗಣೆಯ ಲಾರಿಗಳು ಗುಂಡ್ಯದಲ್ಲಿ ಬಾಕಿಯಾಗಿದ್ದು, ಇದರ ಚಾಲಕ, ಕ್ಲೀನರ್‌ಗಳು ಸಮಸ್ಯೆಯಲ್ಲಿ ಸಿಲುಕಿದ್ದಾರೆ.

ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ದೋಣಿಗಲ್ ನಲ್ಲಿ ತಿಂಗಳ ಹಿಂದೆ ಹೆದ್ದಾರಿ ಕುಸಿತದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರ ನಿಷೇಧಿಸ ಲಾಗಿತ್ತು. ಹೆದ್ದಾರಿ ದುರಸ್ತಿಯಾದ ಹಿನ್ನೆಲೆಯಲ್ಲಿ ಸರ್ಕಾರಿ ಬಸ್ ಸೇರಿದಂತೆ 20 ಟನ್ ಸಾಮರ್ಥ್ಯದ ಒಳಗಿನ ವಾಹನಗಳ ಸಂಚಾರಕ್ಕೆ ಇದೇ 16ರಿಂದ ಅನ್ವಯವಾಗುವಂತೆ ಬೆಳಿಗ್ಗೆ 6ರಿಂದ ಸಂಜೆ 6ರ ತನಕ ಸಂಚಾರಕ್ಕೆ ಅನುಮತಿ ನೀಡಿ ಹಾಸನ ಜಿಲ್ಲಾಧಿಕಾರಿ ಆರ್. ಗಿರೀಶ್‌ ಆದೇಶ ಹೊರಡಿಸಿದ್ದರು.

ಆದರೆ ಬುಲೆಟ್ ಟ್ಯಾಂಕರ್, ಲಾಂಗ್ ಚಾಸೀಸ್ ವಾಹನಗಳು, ಹೆವಿ ಕಮರ್ಷಿಯಲ್ ವೆಹಿಕಲ್ಸ್, ಮಲ್ಟಿ ಏಕ್ಸೆಲ್ ಟ್ರಕ್ ಟ್ರೈಲರ್ ಮತ್ತು ಮೊದಲಾದ ಅಧಿಕ ಬಾರದ ಸರಕು ಸಾಗಣೆ ವಾಹನಗಳ ಸಂಚಾರವನ್ನು ದಿನದ 24 ಗಂಟೆಯೂ ನಿರ್ಬಂಧಿಸಿ ಆದೇಶಿಸಲಾಗಿದೆ. ಆದರೆ, ಇದರ ಸರಿಯಾದ ಮಾಹಿತಿ ತಿಳಿಯದೆ ಮಂಗಳೂರು ಕಡೆಯಿಂದ ಬಂದ ನೂರಾರು ಭಾರಿ ವಾಹನಗಳಿಗೆ ಗುಂಡ್ಯ ಚೆಕ್ ಪೋಸ್ಟ್‌ನಲ್ಲಿ ಉಪ್ಪಿನಂಗಡಿ ಪೊಲೀಸರು ತಡೆಯೊಡ್ಡಿದ್ದಾರೆ.

ADVERTISEMENT

ಇದರಿಂದಾಗಿ ಮೂರ್ನಾಲ್ಕು ದಿನಗಳಿಂದ ಸರಕು ಸಾಗಣೆ ಲಾರಿಗಳು ಗುಂಡ್ಯದಲ್ಲಿಯೇ ಬಾಕಿಯಾಗಿದ್ದು, ನೂರಾರು ಮಂದಿ ಚಾಲಕರು, ನಿರ್ವಾಹಕರು ತೊಂದರೆಗೆ ಸಿಲುಕಿದ್ದಾರೆ. ಹೀಗಾಗಿ ಲಾರಿಗಳ ಸಂಚಾರಕ್ಕೆ ಅವಕಾಶ ನೀಡಬೇಕೆಂದು ಲಾರಿ ಚಾಲಕರು ಪೊಲೀಸರನ್ನು ಕೇಳಿಕೊಂಡಿದ್ದು, ಆದರೆ ಪೊಲೀಸರು ನಿರಾಕರಿಸಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಯಿತು. ‌

ತಹಶೀಲ್ದಾರ್ ಭೇಟಿ, ಚಾಲಕರಿಂದ ನಿವೇದನೆ: ಕಡಬ ತಹಶೀಲ್ದಾರ್ ಅನಂತ ಶಂಕರ ಗುರುವಾರ ಮಧ್ಯಾಹ್ನ ಗುಂಡ್ಯಕ್ಕೆ ತೆರಳಿ ಲಾರಿ ಚಾಲಕರ, ನಿರ್ವಾಹಕರ ಮನವಿ ಆಲಿಸಿದರು. ತಹಶೀಲ್ದಾರ್ ಜತೆ ಮಾತನಾಡಿದ ಕಡಬ ತಾಲ್ಲೂಕು ಲಾರಿ ಚಾಲಕರ ಸಂಘದ ಅಧ್ಯಕ್ಷ ಮೊಯಿದ್ದೀನ್ ಹಾಗೂ ಇತರೆ ಚಾಲಕ, ಕ್ಲೀನರ್‌ಗಳು, ‘ಆಗಸ್ಟ್ 16ರಿಂದ ಭಾರಿ ವಾಹನಗಳ ಸಂಚಾರಕ್ಕೆ ಶಿರಾಡಿ ಘಾಟಿಯಲ್ಲಿ ಅವಕಾಶ ನೀಡಲಾಗುತ್ತದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಸರಕು ಸಾಗಣೆಯ ನೂರಾರು ವಾಹನಗಳು ಬಂದಿವೆ. ಆದರೆ, ಇಲ್ಲಿ ಅವಕಾಶ ನೀಡುತ್ತಿಲ್ಲ, ಈಗ ಬಾಕಿಯಾಗಿರುವ ಲಾರಿಗಳನ್ನು ಬಿಡುವಂತೆ ಒತ್ತಾಯಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಕಡಬ ತಹಶೀಲ್ದಾರ್ ಅನಂತಶಂಕರ್ ದೋಣಿಗಲ್‌ನಲ್ಲಿ ಹೆದ್ದಾರಿ ಕುಸಿತಗೊಂಡಿರುವುದರಿಂದ ಶಿರಾಡಿ ಘಾಟ್‌ನಲ್ಲಿ 6 ಚಕ್ರಕ್ಕಿಂತ ಮೇಲಿನ ವಾಹನಗಳ ಸಂಚಾರಕ್ಕೆ ದಕ್ಷಿಣ ಕನ್ನಡ ಹಾಗೂ ಹಾಸನ ಜಿಲ್ಲಾಧಿಕಾರಿಯವರು ನಿರ್ಬಂಧ ಹೇರಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಕಳ ಇಲ್ಲವೇ ಇತರೇ ಬದಲಿ ರಸ್ತೆ ಮೂಲಕ ಸಂಚರಿಸುವಂತೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಯವರಿಂದ ಅನುಮತಿ ಇಲ್ಲದೇ ಶಿರಾಡಿ ಘಾಟಿಯಲ್ಲಿ ಸಂಚಾರಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

‌ಸ್ಥಳದಲ್ಲಿ ಉಪ್ಪಿನಂಗಡಿ ಎಸ್.ಐ. ಒಮನ ಹಾಗೂ ಪೊಲೀಸ್ ಸಿಬ್ಬಂದಿ ಬಂದೋಬಸ್ಟ್‌ನಲಿ ನಿರತರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.