ದಿನೇಶ್ ಅಮ್ಮಣ್ಣಾಯ
ಮಂಗಳೂರು: ತೆಂಕುತಿಟ್ಟಿನ ಹೆಸರಾಂತ ಭಾಗವತ ದಿನೇಶ್ ಅಮ್ಮಣ್ಣಾಯ ಅವರು ಗುರುವಾರ ನಿಧನರಾದರು.
ದಾಮೋದರ ಮಂಡೇಚ್ಚ ಅವರ ಶಿಷ್ಯರಾಗಿದ್ದ ಅಮ್ಮಣ್ಣಾಯ ಪುತ್ತೂರು ಮೇಳದ ಮೂಲಕ ಕಲಾ ಜೀವನ ಆರಂಭಿಸಿದ್ದರು. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಯಕ್ಷಗಾನ ರಂಗದಲ್ಲಿ ಭಾಗವತರಾಗಿ ಸೇವೆ ನಲ್ಲಿಸಿದ್ದರು.
ತೆಂಕುತಿಟ್ಟಿನ ಪ್ರಸಿದ್ದ ಡೇರೆ ಮೇಳವಾಗಿದ್ದ ಕರ್ನಾಟಕ ಮೇಳದಲ್ಲಿ ಭಾಗವತರಾಗಿದ್ದ ಅವರು ತಮ್ಮ ವಿಶಿಷ್ಟ ರಾಗ ಶೈಲಿಯಿಂದಾಗಿ ಭಾರಿ ಅಭಿಮಾನಿಗಳನ್ನು ಗಳಿಸಿದ್ದರು. ಕರುಣಾ ರಸದ ಪದ್ಯಗಳನ್ನು ರಾಗಬದ್ಧವಾಗಿ ಹಾಡುವುದಕ್ಕೆ ಹೆಸರುವಾಸಿಯಾಗಿದ್ದರು. ಅಭಿಮಾನಿಗಳು ಅವರಿಗೆ 'ರಸರಾಗ ಚಕ್ರವರ್ತಿ' ಎಂದು ಬಿರುದು ನೀಡಿದ್ದರು.
ಎಡನೀರು ಮೇಳದಲ್ಲೂ ತಿರುಗಾಟ ನಡೆಸಿದ್ದರು. ಕೆಲ ವರ್ಷಗಳಿಂದ ವಿಶ್ರಾಂತ ಜೀವನ ನಡೆಸುತ್ತಿದ್ದರು. ಅತಿಥಿ ಭಾಗವತರಾಗಿ ಯಕ್ಷಗಾನ ಕಾರ್ಯಕ್ರಮಗಳ್ಲಿ ಭಾಗವಹಿಸುತ್ತಿದ್ದರು. ಎಡನೀರು ಮಠದ ಸ್ವಾಮೀಜಿಯವರ ಚಾತುರ್ಮಾಸ್ಯದಲ್ಲಿ ಈಚೆಗೆ ಕೊನೇಯದಾಗಿ ಭಾಗವತಿಕೆ ನಡೆಸಿದ್ದರು. ಎರಡು ತಿಂಗಳುಗಳಿಂದ ಅವರ ಆರೋಗ್ಯ ಹದಗೆಟ್ಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.