ತಾರಾನಾಥ ಗಟ್ಟಿ ಕಾಪಿಕಾಡ್
ಮೂಡುಬಿದಿರೆ: ‘ತುಳು ಭಾಷೆ ಅನೇಕ ಸವಾಲುಗಳನ್ನು ಎದುರಿಸಿ ಬೆಳೆದು ಬಂದಿದೆ. ತುಳು ನಮ್ಮೆಲ್ಲರ ನಿತ್ಯ ಬಳಕೆಯ ಭಾಷೆಯಾಗಬೇಕು. ಆಗ ಅದು ವಿಸ್ತಾರವಾಗಿ ಬೆಳೆದು ಮುಂದಿನ ತಲೆಮಾರಿಗೆ ಹಸ್ತಾಂತರವಾಗಲು ಸಾಧ್ಯ’ ಎಂದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡು ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಮಹಾವೀರ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಬುಧವಾರ ಕಾಲೇಜಿನಲ್ಲಿ ನಡೆದ ತುಳುನಾಡ ಸಿರಿ `ಮದಿಪು' ಮಂಗಳೂರು ವಿವಿ ಮಟ್ಟದ ಸಾಂಸ್ಕೃತಿಕ ವೈಭವ ಉದ್ಘಾಟಿಸಿ ಅವರು ಮಾತನಾಡಿದರು.
ಮಹಾವೀರ ಕಾಲೇಜಿನ ವಿದ್ಯಾರ್ಥಿಗಳು ಮೂಡುಬಿದಿರೆ ಸುತ್ತಮುತ್ತ ತುಳು ಸಾಹಿತ್ಯಕ್ಕೆ ಸಂಬಂಧಿಸಿದಂತೆ ಅಧ್ಯಯನ ಮಾಡುವುದಾದರೆ ಅದಕ್ಕೆ ತಗಲುವ ಖರ್ಚನ್ನು ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಭರಿಸಲಾಗುವುದು ಎಂದರು.
ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿದ್ದರು. ಪದವಿ ಕಾಲೇಜಿನ ಪ್ರಾಚಾರ್ಯ ರಾಧಾಕೃಷ್ಣ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಹರೀಶ್ ಸ್ವಾಗತಿಸಿದರು. ಪಪೂ ಕಾಲೇಜಿನ ಪ್ರಾಚಾರ್ಯ ಎಂ.ರಮೇಶ್ ಭಟ್, ಆಡಳಿತ ಮಂಡಳಿ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಗರಾಜ್, ಕಾರ್ಯಕ್ರಮ ಸಂಯೋಜಕರಾದ ಪೂರ್ಣಿಮಾ, ವಿಜಯಲಕ್ಷ್ಮಿ, ರಶ್ಮಿತಾ, ಶಾರದಾ, ಸಂದೀಪ್, ತುಳು ಸಂಘದ ಕಾರ್ಯದರ್ಶಿ ದೀಪಶ್ರೀ, ವಿದ್ಯಾರ್ಥಿ ಕ್ಷೇಮಪಾಲನಾ ಸಂಘದ ನಾಯಕಿ ಶೃತಿ ಎಸ್.ಪೇರಿ, ವಿದ್ಯಾರ್ಥಿ ಸಂಯೋಜಕರಾದ ರೋಸ್ಟಿನ್ ಪಿಂಟೊ, ಕಾರ್ತಿಕ್ ಶೆಟ್ಟಿ, ಸಚಿನ್, ಪ್ರಜ್ವಲ್, ಕಿರಣ್ ಭಾಗವಹಿಸಿದ್ದರು.
ಕಾಲೇಜಿನ ಹಳೆ ವಿದ್ಯಾರ್ಥಿ ಎಂ.ರಾಮ ಕೋಟ್ಯಾನ್ ಅವರನ್ನು ಅಭಿನಂದಿಸಲಾಯಿತು. ನವ್ಯಾ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.