ಮಂಗಳೂರು: ನಗರದ ಮಂಗಳ ಕ್ರೀಡಾಂಗಣದ ಆವರಣದಲ್ಲಿರುವ ಬಾಲಕರ ಮತ್ತು ಬಾಲಕಿಯರ ಕ್ರೀಡಾ ಹಾಸ್ಟೆಲ್ ಮೇಲೆ ಶುಕ್ರವಾರ ಲೋಕಾಯುಕ್ತ ದಾಳಿ ನಡೆದಿದ್ದು ಲೋಪದೋಷಗಳು ಪತ್ತೆಯಾಗಿವೆ ಎಂದು ಲೋಕಾಯುಕ್ತ ಮಂಗಳೂರು ವಿಭಾಗದ ಪ್ರಭಾರ ಅಧೀಕ್ಷಕ ಕುಮಾರಚಂದ್ರ ತಿಳಿಸಿದ್ದಾರೆ.
ಉಪ ಅಧೀಕ್ಷಕರಾದ ಗಾನ ಪಿ ಕುಮಾರ್ ಹಾಗೂ ನಿರೀಕ್ಷಕರಾದ ಭಾರತಿ ಜಿ ಹಾಗೂ ರವಿ ಪವಾರ್ ಸಿಬ್ಬಂದಿ ಜೊತೆ ದಾಳಿ ಮಾಡಿದಾಗ ಅಡುಗೆ ಕೋಣೆಯಲ್ಲಿ ಶುಚಿತ್ವ ಇಲ್ಲದಿರುವುದು, ಸಾಮಗ್ರಿಗಳು ಇಲ್ಲದಿರುವುದು ಪತ್ತೆಯಾಗಿದ್ದು ಅಕ್ಕಿಯಲ್ಲಿ ಹುಳು ಕಂಡುಬಂದಿದೆ. ಸ್ಟಾಕ್ ರಿಜಿಸ್ಟರ್ ಇಲ್ಲದಿರುವುದು, ಅಡುಗೆಗೆ ಗುಣಮಟ್ಟವಿಲ್ಲದ ಎಣ್ಣೆ ಬಳಸುವುದು ಕೂಡ ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ವಸತಿ ಗೃಹದಲ್ಲಿ 33 ಕ್ರೀಡಾಪಟುಗಳು ಇದ್ದು ಬಾಲಕ ಮತ್ತು ಬಾಲಕಿಯರಿಗೆ ಒಂದೇ ಕಡೆಯಲ್ಲಿ ಊಟ ಬಡಿಸಲಾಗುತ್ತಿತ್ತು. ಸರ್ಕಾರದಿಂದ ಅನುದಾನ ಸಿಗುತ್ತಿದ್ದರೂ ಆರು ತಿಂಗಳು ಪೋಷಕರೇ ಕ್ರೀಡಾ ಸಾಮಗ್ರಿ ಖರೀದಿಸಿಕೊಡಬೇಕಾಗುತ್ತದೆ. ಅನುದಾನ ದುರುಪಯೋಗವಾಗಿರುವುದೂ ಕಂಡುಬಂದಿದೆ.
ಕ್ರೀಡಾ ಇಲಾಖೆ ಕಚೇರಿ ಆವರಣದಲ್ಲೇ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಇದ್ದರೂ ವಸತಿ ನಿಲಯಕ್ಕೆ ಭೇಟಿ ನೀಡದಿರುವುದು ಕಂಡುಬಂದಿದೆ ಎಂದು ಅವರು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.