ADVERTISEMENT

ಪಿಲಿಕುಳ: ಕೋಟಿಗೆ ತಲುಪಿದ ನಷ್ಟ!

​ಪ್ರಜಾವಾಣಿ ವಾರ್ತೆ
Published 21 ಮೇ 2020, 14:24 IST
Last Updated 21 ಮೇ 2020, 14:24 IST

ಮಂಗಳೂರು: ಕೋವಿಡ್–19 ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಇಲ್ಲಿನ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮಕ್ಕೆ ಮಾ.15ರಿಂದಲೇ ಪ್ರವಾಸಿಗರ ಭೇಟಿ ನಿಷೇಧಿಸಲಾಗಿದ್ದು, ₹1 ಕೋಟಿಯಷ್ಟು ನಷ್ಟ ಅಂದಾಜಿಸಲಾಗಿದೆ.

ಲಾಕ್‌ಡೌನ್‌ ಪೂರ್ವದಲ್ಲೇ ಪ್ರವಾಸಿಗರ ಭೇಟಿ ನಿಷೇಧಿಸಲಾಗಿದ್ದು, 10 ವಾರಗಳನ್ನು ಪೂರೈಸುತ್ತಿದೆ. ಇದರಿಂದಾಗಿ ವಾರಕ್ಕೆ ₹10 ಲಕ್ಷದಂತೆ ನಷ್ಟದ ಪ್ರಮಾಣವು ಬರೋಬ್ಬರಿ ₹1 ಕೋಟಿಗೆ ತಲುಪಿದೆ.

ಪಿಲಿಕುಳದಲ್ಲಿ ಜೈವಿಕ ಉದ್ಯಾನ, ವಿಜ್ಞಾನ ಕೇಂದ್ರ, ಸರೋವರ, ಉದ್ಯಾನ, ಬೋಟಿಂಗ್, ವಾಟರ್ ಅಮ್ಯೂಸ್‌ಮೆಂಟ್, ಗಾಲ್ಫ್, ಪಾರಂಪರಿಕ ಹಳ್ಳಿ ಮತ್ತಿತರ ಪ್ರವಾಸಿ ತಾಣಗಳಿವೆ. ಪ್ರತಿನಿತ್ಯ ಸಾವಿರದಿಂದ ಮೂರು ಸಾವಿರ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಹೀಗಾಗಿ, ವಾರಕ್ಕೆ ₹10 ಲಕ್ಷದಷ್ಟು ಆದಾಯವಿತ್ತು.

ADVERTISEMENT

ಇಲ್ಲಿನ ಮೃಗಾಲಯದಲ್ಲಿ ಸುಮಾರು 1,300 ಪ್ರಭೇದಗಳ ಪ್ರಾಣಿ, ಪಕ್ಷಿ, ಸರೀಸೃಪ, ಸಸ್ತನಿ ಸೇರಿದಂತೆ ಜೀವ ವೈವಿಧ್ಯಗಳಿವೆ. ಲಾಕ್‌ಡೌನ್ ಅವಧಿಯಲ್ಲಿ ಇವುಗಳ ಆಹಾರವಾದ ತರಕಾರಿ, ಮೀನು, ಮಾಂಸ ಇತ್ಯಾದಿಗಳ ಲಭ್ಯತೆಯೂ ಕಷ್ಟವಾಗಿತ್ತು. ಅಲ್ಲದೇ, ಹೆಚ್ಚಿನ ಮುನ್ನೆಚ್ಚರಿಕೆ ಕೈಗೊಳ್ಳಲಾಗಿತ್ತು. ರೋಗ ತಡೆಗೆ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗಿತ್ತು. ಆಹಾರ ಲಭ್ಯತೆ ಕೊರತೆ ಹಾಗೂ ಬೆಲೆಯೇರಿಕೆಯೂ ವೆಚ್ಚದ ಪ್ರಮಾಣ ಹೆಚ್ಚಿಸಿದೆ.

‘ಲಾಕ್‌ಡೌನ್‌ ಸಂದರ್ಭದಲ್ಲಿ ತೀವ್ರ ಸವಾಲು ಎದುರಿಸಿದ್ದೆವು. ಈಗ ಎಲ್ಲ ಸಿಬ್ಬಂದಿ ಬರುತ್ತಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿಕೊಂಡು ನಿರ್ವಹಿಸುತ್ತಿದ್ದೇವೆ. ಆದರೆ, ಪ್ರವಾಸಿಗರ ಭೇಟಿಗೆ ಅವಕಾಶ ಕಲ್ಪಿಸಿಲ್ಲ. ಸರ್ಕಾರದ ನಿರ್ದೇಶನಕ್ಕೆ ಕಾಯುತ್ತಿದ್ದೇವೆ’ ಎನ್ನುತ್ತಾರೆ ನಿಸರ್ಗಧಾಮದ ನಿರ್ದೇಶಕ ಎಚ್.ಜಯಪ್ರಕಾಶ್ ಭಂಡಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.