ಮಹೇಶ್ ಶೆಟ್ಟಿ ತಿಮರೋಡಿ
ಮಂಗಳೂರು: ಧರ್ಮಸ್ಥಳ ಗ್ರಾಮದ ವಿವಿಧ ವಸತಿ ಗೃಹಗಳಲ್ಲಿ 2006 ರಿಂದ 2010 ರ ಅವಧಿಯಲ್ಲಿ ಸಂಭವಿಸಿದ ನಾಲ್ಕು ಅಸಹಜ ಸಾವು ಪ್ರಕರಣಗಳ ತನಿಖೆ ನಡೆಸುವಂತೆ ಒತ್ತಾಯಿಸಿ ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರು ವಿಶೇಷ ತನಿಖಾ ತಂಡದ ಬೆಳ್ತಂಗಡಿ ಕಚೇರಿಗೆ ತೆರಳಿ ಗುರುವಾರ ರಾತ್ರಿ ದೂರು ನೀಡಿದ್ದಾರೆ.
2006 ರಿಂದ 2010 ರ ಅವಧಿಯಲ್ಲಿ ಸಂಭವಿಸಿದ ನಾಲ್ಕು ಅಸಹಜ ಸಾವು ಪ್ರಕರಣಗಳು ಸಂಭಾವ್ಯ ಕೊಲೆ ಪ್ರಕರಣಗಳಾಗಿರುವ ಸಾಧ್ಯತೆ ಇರುವುದರಿಂದ ವಿಶೇಷ ತನಿಖಾ ದಳವು ಈ ಬಗ್ಗೆ ತನಿಖೆ ನಡೆಸಬೇಕು ಎಂದು ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ. ದೂರಿಗೆ ಪೂರಕವಾಗಿ ಮಾಹಿತಿ ಹಕ್ಕಿನಲ್ಲಿ ಪಡೆದಿದ್ದ ದಾಖಲೆಗಳನ್ನು ನೀಡಿದ್ದಾರೆ.
ಮೂರು ವಸತಿ ಗೃಹಗಳಲ್ಲಿ ನಡೆದ ನಾಲ್ಕು ಅಸಹಜ ಸಾವುಗಳ ಬಗ್ಗೆ ದೂರಿನಲ್ಲಿ ಪ್ರಸ್ತಾಪಿಸಿದ್ದಾರೆ. ಇವುಗಳನ್ನು ಗುರುತು ಪತ್ತೆಯಾಗದ ಶವಗಳೆಂದು ಘೋಷಿಸಿ ಗ್ರಾಮ ಪಂಚಾಯಿತಿ ಮೂಲಕ ತರಾತುರಿಯಲ್ಲಿ ದಫನ ಮಾಡಲಾಗಿದೆ. ಈ ಬಗ್ಗೆ ಕೇವಲ ಅಸಹಜ ಮರಣ ಪ್ರಕರಣ ದಾಖಲಿಸಲಾಗಿದೆ. ಕೊಲೆ ಅಥವಾ ಆತ್ಮಹತ್ಯೆಯ ಸಂಶಯವಿದ್ದರೂ ಈ ಬಗ್ಗೆ ಎಫ್.ಐ.ಆರ್ ದಾಖಲಿಸದಿರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದು ಮಹೇಶ್ ಶೆಟ್ಟಿ ತಿಮರೋಡಿ ದೂರಿನಲ್ಲಿ ಆರೋಪಿಸಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.