ಮಂಗಳೂರು: ಶುಕ್ರವಾರ ನಗರಕ್ಕೆ ಭೇಟಿ ನೀಡಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಮಂಗಳೂರು ನಗರ ಸಜ್ಜಾಗುತ್ತಿದೆ. ಪ್ರಮುಖ ರಸ್ತೆಗಳ ಡಿವೈಡರ್ ಗಳಿಗೆ ಕೇಸರಿ ಮತ್ತು ಹಸಿರು ಬಂಟಿಂಗ್ಸ್ ಕಟ್ಟಲಾಗಿದ್ದು ವೃತ್ತಗಳೂ ಕೂಡ ಬಿಜೆಪಿ ಧ್ವಜದ ಬಣ್ಣದಲ್ಲಿ ಮುಳುಗಿವೆ. ಪ್ರಮುಖ ಮುಖಂಡರ ಹೆಸರಿನಲ್ಲಿ ಸ್ವಾಗತ ಫ್ಲೆಕ್ಸ್ ವಿವಿಧ ಕಡೆಗಳಲ್ಲಿ ರಾರಾಜಿಸುತ್ತಿವೆ.
ಈ ನಡುವೆ ಕಾರ್ಯಕ್ರಮಕ್ಕೆ ಹೆಚ್ಚು ಜನರನ್ನು ಸೇರಿಸಲು ಜನಪ್ರತಿಗಳು ಪ್ರಯತ್ನಿಸುತ್ತಿದ್ದಾರೆ.
ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ಉರ್ವ ಪರಿಸರದಲ್ಲಿ ಮನೆ ಮನೆಗೆ ತೆರಳಿ ಕರಪತ್ರ ಹಂಚಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಕಾರ್ಯಕ್ರಮಕ್ಕೆ ಸಾರ್ವಜನಿಕರನ್ನು ಆಹ್ವಾನಿಸುವುದಕ್ಕಾಗಿ ಪಕ್ಷದ ಕಾರ್ಯಕರ್ತರು ಕ್ಷೇತ್ರದ ಪ್ರತಿ ಮನೆಗೂ ತೆರಳಿದ್ದಾರೆ. ಹೀಗಾಗಿ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿ ಜನ ಸೇರಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ಆಡಳಿತ ಯಂತ್ರ ದುರುಪಯೋಗ ಆರೋಪ: ಮೋದಿ ಕಾರ್ಯಕ್ರಮಕ್ಕೆ ಜನ ಸೇರಿಸುವುದಕ್ಕಾಗಿ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ತಾಲ್ಲೂಕುಗಳಿಂದ ಜನರನ್ನು ಕರೆ ತರಲು ತಾಲ್ಲೂಕು ಆಡಳಿತವೇ ವಾಹನ ವ್ಯವಸ್ಥೆ ಮಾಡಿದೆ ಎಂಬ ಆರೋಪ ಎದ್ದಿದೆ. ಕಡಬ ತಾಲ್ಲೂಕು ಪಂಚಾಯಿತಿ ಈ ಸಂಬಂಧ ಹೊರಡಿಸಿರುವ ಆದೇಶದ ಪ್ರತಿ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.
'ಆಡಳಿತ ಯಂತ್ರ ದುರುಪಯೋಗಪಡಿಸಿಕೊಂಡಿರುವುದು ಖಂಡನೀಯ' ಎಂದು ಡಿವೈಎಫ್ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.