
ಮಂಗಳೂರು: ಆನ್ಲೈನ್ ಟ್ರೇಡಿಂಗ್ ನೆಪದಲ್ಲಿ ₹ 13.72 ಲಕ್ಷ ಕಟ್ಟಿಸಿಕೊಂಡು ವಂಚಿಸಿದ ಬಗ್ಗೆ ಸಂತ್ರಸ್ತ ವ್ಯಕ್ತಿ ದೂರು ನೀಡಿದ್ದು, ಸುರತ್ಕಲ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
‘ಆನ್ ಲೈನ್ ಟ್ರೇಡಿಂಗ್ ನಡೆಸುತ್ತಿದ್ದಾಗ 2025ರ ಸೆ. 2ರಂದು ನನ್ನ ವಾಟ್ಸ್ ಆ್ಯಪ್ಗೆ ಪ್ರವೀಣ್ ಪಟೇಲ್ ಎಂಬ ವ್ಯಕ್ತಿಯ ಬಿ–53 ವೆಲ್ತ್ ಅಕಾಡೆಮಿ ಎಂಬ ಗ್ರೂಪ್ನಿಂದ ಸಂದೇಶ ಕಳುಹಿಸಿದ್ದ. ದಿನಂಪ್ರತಿ ಷೇರು ಮಾರುಕಟ್ಟೆಯ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದ ಆತ ಸೆ. 17ರಂದು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಟೆನ್ಕೋರ್ ಸಂಸ್ಥೆಯಡಿ ಖಾತೆ ತೆರೆಯಲು ಕ್ರಿಸ್ ಹಾರ್ಪರ್ ಎಂಬಾತನನ್ನು ಸಂಪರ್ಕಿಸಲು ಸಲಹೆ ನೀಡಿದ್ದ. ಆತನ ಮೊಬೈಲ್ ನಂಬರ್ ನೀಡಿದ್ದ. ₹50 ಸಾವಿರದಿಂದ ಹೂಡಿಕೆ ಪ್ರಾರಂಭಿಸಲು ಕ್ರಿಸ್ ಹಾರ್ಪರ್ ಸಲಹೆ ನೀಡಿದ್ದ. ಆತನ ಸೂಚನೆ ಮೇರೆಗೆ ರಾಜ್ ಟ್ರೇಡರ್ಸ್ ಎಂಬ ಖಾತೆಗೆ ಅ.6ರಂದು ₹ 50 ಸಾವಿರ ವರ್ಗಾಯಿಸಿದ್ದೆ. ಎರಡು ದಿನದಲ್ಲಿ ಸುಮಾರು ₹ 6,500 ಲಾಭ ಬಂದಿತ್ತು ಎಂದು ಸಂತ್ರಸ್ತ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ.’
‘ಲಾಭದ ಹಣದಲ್ಲಿ ನನ್ನ ಕೋರಿಕೆ ಮೇರೆಗೆ ₹ 1500 ಹಣ ಒಂದು ಗಂಟೆಯಲ್ಲಿ ನನ್ನ ಖಾತೆಗೆ ಜಮೆಯಾಗಿತ್ತು. ಮತ್ತೆ ಕ್ರಿಸ್ ಹಾರ್ಪರ್ ಸಲಹೆ ಪ್ರಕಾರ ಅ. 19ರಂದು ಮತ್ತೊಂದು ಖಾತೆಗೆ ₹ 1 ಲಕ್ಷ ವರ್ಗಾಯಿಸಿದ್ದೆ. ನನಗೆ ₹ 1.70 ಲಕ್ಷ ಲಾಭ ಬಂದಿತ್ತು. ಅದರಿಂದ ಒಟ್ಟು 182 ಷೇರುಗಳಿಗೆ ಹೂಡಿಕೆ ಮಾಡಲು ಅವಕಾಶವಿದೆ ಎಂದು ಪ್ರವೀಣ್ ಪಟೇಲ್ ತಿಳಿಸಿದ್ದ. ಆತನ ಸಲಹೆ ಮೇರೆಗೆ ಆ ಹಣವನ್ನು ಅದಕ್ಕೆ ವಿನಿಯೋಗಿಸಿದ್ದೆ. ಇದೇ ರೀತಿ ಹಂತ ಹಂತವಾಗಿ ನಾನು ₹ 13.72 ಲಕ್ಷ ವರ್ಗಾಯಿಸಿದ್ದೆ. ನನ್ನ ಹೂಡಿಕೆಗೆ ಶೇ 300 ರಷ್ಟು ಲಾಭಾಂಶವನ್ನು ಆ್ಯಪ್ನಲ್ಲಿ ತೋರಿಸಲಾಗಿತ್ತು. ಅವರು ಕೇಳಿದಷ್ಟು ಹಣ ವರ್ಗಾವಣೆ ಮಾಡದಿದ್ದಲ್ಲಿ ಷೇರನ್ನು ಮಾರಲು ಬಿಡುವುದಿಲ್ಲ. ಸೆಬಿಯಿಂದ ನೋಟಿಸ್ ಜಾರಿಯಾಗಲಿದೆ ಎಂದೂ ಬೆದರಿಸಿದರು. ಹೂಡಿದ ಹಣವನ್ನು ವಾಪಾಸ್ ಪಡೆಯಲು ಮತ್ತೆ ಶೇ 38ರಷ್ಟು ಹಣ ಕಟ್ಟುವಂತೆ ಕೇಳಿದರು. ಆಗ ಮೋಸ ಹೋಗಿರುವುದು ಖಚಿತವಾಯಿತು ಎಂದು ಸಂತ್ರಸ್ತ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.