ADVERTISEMENT

ಮಂಗಳೂರು; ಶಾಸಕ ರಾಜೇಶ್ ನಾಯಕ್ ಉಳಿಪಾಡಿಗುತ್ತು ಅವರ ಜೊತೆ ಪ್ರೆಸ್ ಕ್ಲಬ್‌ ಸಂವಾದ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2023, 4:42 IST
Last Updated 19 ಡಿಸೆಂಬರ್ 2023, 4:42 IST
ಸಂವಾದಲ್ಲಿ ಶಾಸಕ ರಾಜೇಶ್ ನಾಯ್ಕ್‌ ಉಳಿಪಾಡಿಗುತ್ತು ಮಾತನಾಡಿದರು
ಸಂವಾದಲ್ಲಿ ಶಾಸಕ ರಾಜೇಶ್ ನಾಯ್ಕ್‌ ಉಳಿಪಾಡಿಗುತ್ತು ಮಾತನಾಡಿದರು   

ಮಂಗಳೂರು: ಕೃಷಿಯಲ್ಲಿ ತೊಡಗಿಸಿಕೊಳ್ಳಲು ವಿವಿಧ ಕಾರಣಗಳಿಂದ ಜನರು ಹಿಂದೇಟು ಹಾಕುತ್ತಾರೆ. ಈ ರೀತಿಯ ಮನಸ್ಥಿತಿ ಇಲ್ಲದಾಗಬೇಕು. ಕೃಷಿ ಮಾಡುತ್ತ ಉಳಿದ ಸಮಯವನ್ನು ಸದುಪಯೋಗ ಮಾಡಿಕೊಂಡು ವೃತ್ತಿಯಲ್ಲೂ ತೊಡಗಿಸಿಕೊಂಡರೆ ಸಂತೃಪ್ತ ಜೀವನ ಸಾಗಿಸಬಹುದು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪಾಡಿಗುತ್ತು ಅಭಿಪ್ರಾಯಪಟ್ಟರು.

ನಗರದ ಪತ್ರಕರ್ತರ ಭವನದಲ್ಲಿ ಮಂಗಳೂರು ಪ್ರೆಸ್ ಕ್ಲಬ್‌ ಸೋಮವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕೃಷಿ ಕ್ರಾಂತಿ ಆದ ನಂತರ ಉತ್ಪಾದನೆ ಹೆಚ್ಚಿದೆ. ಆದರೆ ಅವೈಜ್ಞಾನಿಕ ವಿಧಾನಗಳಿಂದಾಗಿ ಭೂಮಿಯ ಫಲವತ್ತದೆ ಕುಂದುತ್ತಿದೆ. ಇದನ್ನು ತಡೆಯಬೇಕು ಎಂದರು.

ಆಹಾರ ಮತ್ತು ತ್ಯಾಜ್ಯ ನಿರ್ವಹಣೆ ಭವಿಷ್ಯದ ದೊಡ್ಡ ಉದ್ಯಮವಾಗುವ ಸಾಧ್ಯತೆಗಳು ಇವೆ. ದೇಶದಲ್ಲಿ ಕೃಷಿ ಕ್ಷೇತ್ರ ವಿಸ್ತಾರವಾಗಿದೆಯಾದರೂ ಜಿಡಿಪಿಯಲ್ಲಿ ಅದರ ಪಾಲು ಶೇ 14 ಮಾತ್ರ. ಅದನ್ನು ಹೆಚ್ಚಿಸಲು ಮುಂದಾಗಬೇಕು. ಅದು ಸಾಧ್ಯವಾದರೆ ದೇಶ ಸ್ವಾವಲಂಬಿ ಆಗಲಿದೆ. ಗಿಡ–ಮರ ಇದ್ದಲ್ಲಿ ನೀರು ಸಮೃದ್ಧ ಆಗಿರುತ್ತದೆ. ಆದ್ದರಿಂದ ಯಾವುದನ್ನೂ ಬರಡು ಭೂಮಿ ಎಂದು ಹೇಳುವುದು ಸರಿಯಲ್ಲ. ಗಿಡಗಳನ್ನು ಬೆಳೆಸಿದರೆ ಭೂಮಿ ಸಮೃದ್ಧ ಆಗುತ್ತದೆ ಎಂದು ಒಡ್ಡೂರು ಫಾರ್ಮ್‌ನಲ್ಲಿ ಕೃಷಿ, ಹೈನುಗಾರಿಕೆ ಮತ್ತು ತ್ಯಾಜ್ಯ ಬಳಸಿ ಸಿಎನ್‌ಜಿ ತಯಾರಿಸುತ್ತಿರುವ ರಾಜೇಶ್ ನಾಯ್ಕ್‌ ಹೇಳಿದರು.

ADVERTISEMENT

ಒಡ್ಡೂರು ಫಾರ್ಮ್‌ನಲ್ಲಿ ಮದುವೆ ಸಮಾರಂಭಗಳನ್ನು ಆಯೋಜಿಸಿ ಕೃಷಿ ಬಗ್ಗೆ ಆಸಕ್ತಿ ಮೂಡಿಸುವ ಆಲೋಚನೆ ಇದೆ. ಸಿಎನ್‌ಜಿ ಘಟಕದ ಅನಿಲವನ್ನು ಗೇಲ್‌ಗೆ ಮಾರಾಟ ಮಾಡುವ ಸಂಬಂಧ ಮಾತುಕತೆ ನಡೆಸಲಾಗುವುದು ಎಂದ ಅವರು ಕೃಷಿ ಜಮೀನನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವವರು ಬೇರೆ ಕಡೆ ಕೃಷಿಗೆ ಪರ್ಯಾಯ ವ್ಯವಸ್ಥೆ ಮಾಡಿ ಕಾಳಜಿ ಮೆರೆಯಬೇಕು ಎಂದು ಸಲಹೆ ನೀಡಿದರು.

ಪತ್ರಕರ್ತ ಬಾಲಕೃಷ್ಣ ಗಟ್ಟಿ ಉದ್ಘಾಟಿಸಿದರು. ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಆರಿಫ್ ಪಡುಬಿದ್ರಿ, ರಾಮಕೃಷ್ಣ, ಇಬ್ರಾಹಿಂ ಅಡ್ಕಸ್ಥಳ ಮತ್ತು ಪುಷ್ಪರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.