ರಾಮಲಿಂಗರೆಡ್ಡಿ
ಪ್ರಜಾವಾಣಿ ಚಿತ್ರ
ಮಂಗಳೂರು: ಖಾಸಗಿ ಬಸ್ಗಳಲ್ಲಿ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಓಡಾಡುವ ಬಸ್ಗಳಲ್ಲಿ ಬಾಗಿಲು ಕಡ್ಡಾಯವಾಗಿ ಇರುವುದನ್ನು ಖಾತರಿಪಡಿಸಿಕೊಳ್ಳುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್ ಕೆ ಮಲ್ಲಾಡ್ ಅವರಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸೂಚಿಸಿದರು.
ಮುಡಿಪುವಿನಲ್ಲಿ ವಾಹನ ಚಾಲನಾ ಪರೀಕ್ಷಾ ಕೇಂದ್ರವನ್ನು ವೀಕ್ಷಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಾಗಿಲುಗಳಿಲ್ಲದೇ ರಸ್ತೆಗೆ ಇಳಿಯುವ ಬಸ್ಗಳಿಗೆ ಎಫ್ಸಿ (ಫಿಟ್ನೆಸ್ ಸರ್ಟಿಫಿಕೆಟ್) ನೀಡಬೇಡಿ ಎಂದು ಹೇಳಿದರು.
‘ಇ ಬಸ್ಗಳಿಗೆ ಬೇಡಿಕೆ ಸಲ್ಲಿಸಿದ್ದು ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಡಲಿರುವ ಬಸ್ಗಳ ಖರೀದಿಗಾಗಿ ಟೆಂಡರ್ ಕರೆಯಬೇಕಾಗಿದೆ. ಇದಕ್ಕೆ ಕನಿಷ್ಟ ಆರು ತಿಂಗಳ ಸಮಯ ಬೇಕಾದೀತು. ಬಸ್ಗಳನ್ನು ಒದಗಿಸಿದರೆ ಮಂಗಳೂರಿಗೂ ಹಂಚಲಾಗುವುದು’ ಎಂದು ಅವರು ತಿಳಿಸಿದರು.
‘ಮುಡಿಪು ತರಬೇತಿ ಕೇಂದ್ರದಲ್ಲಿ ಪ್ರಯೋಗಿಕ ತರಬೇತಿಗೂ ಸೌಲಭ್ಯ ಒದಗಿಸಬೇಕು ಎಂಬ ಬೇಡಿಕೆ ಬಂದಿದೆ. ಇದನ್ನು ಪರಿಗಣಿಸಲಾಗಿದ್ದು ಅಗತ್ಯ ಇರುವವರಿಗೆ ತರಬೇತಿ ನೀಡಲು ಮತ್ತು ಉಳಿದುಕೊಳ್ಳಲು ಬೇಕಾದ ವ್ಯವಸ್ಥೆ ಮಾಡಲಾಗುವುದು. ತರಬೇತಿಗೆ ಟ್ರಕ್ ಅಥವಾ ಬಸ್ ಬೇಕಾಗಿದೆ. ಬಸ್ ಕೆಎಸ್ಆರ್ಟಿಸಿಯಿಂದ ಪಡೆದುಕೊಳ್ಳಬಹುದು. ಟ್ರಕ್ ಖರೀದಿಗೆ ಆರ್ಥಿಕ ಇಲಾಖೆಯ ಅನುಮತಿ ಬೇಕು’ ಎಂದು ಅವರು ತಿಳಿಸಿದರು.
‘ಹಬ್ಬದ ಸಂದರ್ಭದಲ್ಲಿ ಖಾಸಗಿ ಬಸ್ನವರು ಹೆಚ್ಚುವರಿ ದರ ಪಡೆಯುವುದನ್ನು ತಡೆಯಲು 2300 ಕೆಎಸ್ಆರ್ಟಿಸಿ ಬಸ್ಗಳನ್ನು ರಸ್ತೆ ಇಳಿಸಲಾಗುವುದು. ಗಣೇಶ ಹಬ್ಬದ ಸಂದರ್ಭದಲ್ಲಿ 1200 ಬಸ್ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ’ ಎಂದು ಅವರು ಹೇಳಿದರು.
ಮುಜರಾಯಿ ದೇವಸ್ಥಾನಗಳ ಆಡಳಿತದಲ್ಲಿ ಮೂಗು ತೂರಿಸಲು ಸರ್ಕಾರಕ್ಕೆ ಅಧಿಕಾರ ಇಲ್ಲ. ಆದ್ದರಿಂದ ಕಟೀಲ್ ದೇವಸ್ಥಾನದಲ್ಲಿ ಸೇವೆಗಳ ದರವನ್ನು ಹೆಚ್ಚಳ ಮಾಡಲಾಗಿದೆ ಎಂಬ ಆರೋಪದಲ್ಲಿ ಸರ್ಕಾರವನ್ನು ದೂರುತ್ತ ಬಿಜೆಪಿಯವರು ಗೊಂದಲ ಸೃಷ್ಟಿಸಿದ್ದಾರೆ ಎಂದು ಮುಜರಾಯಿ ಸಚಿವರೂ ಆಗಿರುವ ರಾಮಲಿಂಗಾ ರೆಡ್ಡಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.