ADVERTISEMENT

ಮಂಗಳೂರು| ಸಮಗ್ರ ಪೋಷಣೆಯಿಂದ ಕಲೆಯ ಉಳಿವು: ವಾಸುದೇವ ರಂಗ ಭಟ್

ಯಕ್ಷೋತ್ಸವ ಉದ್ಘಾಟಿಸಿದ ಕಲಾವಿದ ವಾಸುದೇವ ರಂಗ ಭಟ್

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2023, 6:00 IST
Last Updated 11 ಮಾರ್ಚ್ 2023, 6:00 IST
ಮಂಗಳೂರಿನ ಎಸ್‌ಡಿಎಂ ಕಾಲೇಜಿನಲ್ಲಿ ಆಯೋಜಿಸಿರುವ ‘ಯಕ್ಷೋತ್ಸವ –2023’ ಎರಡು ದಿನಗಳ ಅಂತರ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆಯಲ್ಲಿ ಮಂಗಳೂರಿನ ಕೆನರಾ ಕಾಲೇಜಿನ ವಿದ್ಯಾರ್ಥಿಗಳು ‘ಸಾಯುಜ್ಯ ಸಂಗ್ರಾಮ’ ಪ್ರಸಂಗ ಪ್ರಸ್ತುತಪಡಿಸಿದರು   ಪ್ರಜಾವಾಣಿ ಚಿತ್ರ; ಫಕ್ರುದ್ದೀನ್ ಎಚ್
ಮಂಗಳೂರಿನ ಎಸ್‌ಡಿಎಂ ಕಾಲೇಜಿನಲ್ಲಿ ಆಯೋಜಿಸಿರುವ ‘ಯಕ್ಷೋತ್ಸವ –2023’ ಎರಡು ದಿನಗಳ ಅಂತರ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆಯಲ್ಲಿ ಮಂಗಳೂರಿನ ಕೆನರಾ ಕಾಲೇಜಿನ ವಿದ್ಯಾರ್ಥಿಗಳು ‘ಸಾಯುಜ್ಯ ಸಂಗ್ರಾಮ’ ಪ್ರಸಂಗ ಪ್ರಸ್ತುತಪಡಿಸಿದರು   ಪ್ರಜಾವಾಣಿ ಚಿತ್ರ; ಫಕ್ರುದ್ದೀನ್ ಎಚ್   

ಮಂಗಳೂರು: ಯಕ್ಷಗಾನದ ಒಂದು ವಿಭಾಗವನ್ನು ಪ್ರೀತಿಸುವ ಬದಲಾಗಿ ಸಮಗ್ರ ಯಕ್ಷಗಾನ ಕಲೆಯನ್ನು ಪ್ರೀತಿಸಿದರೆ ಈ ಕಲೆ ಉಳಿಯಬಲ್ಲದು ಎಂದು ಕಲಾವಿದ ವಾಸುದೇವ ರಂಗ ಭಟ್ ಹೇಳಿದರು.

ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯ, ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರ ವತಿಯಿಂದ ಎಸ್‍ಡಿಎಂ ಕಾನೂನು ಕಾಲೇಜಿನ ಆವರಣದಲ್ಲಿ ಶುಕ್ರವಾರ ನಡೆದ 31ನೇ ವರ್ಷದ ಎರಡು ದಿನಗಳ ಅಂತರ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ ‘ಯಕ್ಷೋತ್ಸವ –2023’ ಉದ್ಘಾಟಿಸಿ ಅವರು ಮಾತನಾಡಿದರು.

ಯಕ್ಷಗಾನದ ಹಾಸ್ಯ, ಕುಣಿತದಂತಹ ಒಂದು ವಿಭಾಗವನ್ನು ಮಾತ್ರ ಮೆಚ್ಚಿಕೊಂಡು ತಮಗೆ ಬೇಕಾದ ನಿರ್ದಿಷ್ಟ ಪಾತ್ರ ಮುಗಿದ ಬಳಿಕ ಎದ್ದು ಹೋಗುವವರನ್ನು ಕಾಣುತ್ತಿದ್ದೇವೆ. ಕಲೆಯನ್ನು ಅರಿಯದೆ ಪೋಷಿಸುವವರು ಹೆಚ್ಚುತ್ತಿದ್ದಾರೆ. ನೈಜ ಪ್ರೇಕ್ಷಕರು ಯಕ್ಷಗಾನದಿಂದ ದೂರ ಸರಿಯುತ್ತಿದ್ದಾರೆ. ಇದರಿಂದ ಯಕ್ಷಗಾನದಲ್ಲಿ ಒಂದು ರೀತಿಯ ನಿರ್ವಾತ ಸೃಷ್ಟಿಯಾಗಿದೆ. ಸಮಗ್ರ ಯಕ್ಷಗಾನವನ್ನು ಪ್ರೀತಿಸಿದಾಗ ಇದು ಸರಿದೂಗಬಹುದು ಎಂದರು.

ADVERTISEMENT

ವಕೀಲ ಜಯರಾಮ ಪದಕಣ್ಣಾಯ ಅತಿಥಿಯಾಗಿದ್ದರು. ಎಸ್‍ಡಿಎಂ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ. ತಾರಾನಾಥ ಅಧ್ಯಕ್ಷತೆ ವಹಿಸಿದ್ದರು. ಯಕ್ಷೋತ್ಸವದ ಸಂಚಾಲಕ ಪ್ರೊ. ನರೇಶ್ ಮಲ್ಲಿಗೆಮಾಡು ಸ್ವಾಗತಿಸಿದರು. ಪ್ರೊ. ಪುಷ್ಪರಾಜ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಶುಭಲಕ್ಷ್ಮಿ ವಂದಿಸಿದರು. ಯಕ್ಷೋತ್ಸವ ವಿದ್ಯಾರ್ಥಿ ಕಾರ್ಯದರ್ಶಿ ಪ್ರಶಾಂತ್ ಐತಾಳ್, ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಅನ್ಸಿಟಾ ಒಲಿವಿಯಾ ಪಿಂಟೊ ಇದ್ದರು.

ಎರಡು ದಿನಗಳ ಯಕ್ಷೋತ್ಸವದಲ್ಲಿ 11 ಕಾಲೇಜು ತಂಡಗಳು ಭಾಗವಹಿಸಿವೆ. ಯಕ್ಷಗಾನ ಹವ್ಯಾಸಿ ಕಲಾವಿದ, ನಿವೃತ್ತ
ಪ್ರಾಂಶುಪಾಲ ದುಗ್ಗಪ್ಪ ಅಂಜೇರಿ, ಯಕ್ಷಗಾನ ಗುರು ತಾರಾನಾಥ ಸವಣೂರು, ಭಾಗವತರಾದ ಸುಬ್ರಹ್ಮಣ್ಯ, ಎಸ್‍ಎಸ್‍ಪಿಯು ಕಾಲೇಜು ಉಪನ್ಯಾಸಕಿ ಭವ್ಯಶ್ರೀ ಕುಲ್ಕುಂದ ತೀರ್ಪುಗಾರರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.