ಬಂಧನ ( ಸಾಂಕೇತಿಕ ಚಿತ್ರ)
ಮಂಗಳೂರು: ತಣ್ಣಿರುಬಾವಿಯ ಗಣೇಶ ಕಟ್ಟೆಯಲ್ಲಿ ಎರಡು ಗುಂಪುಗಳ ನಡುವೆ ಭಾನುವಾರ ರಾತ್ರಿ ಘರ್ಷಣೆ ನಡೆದಿದ್ದು, ಪಣಂಬೂರು ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ. ಈ ಸಂಬಂಧ ನಾಲ್ವರು ಅರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
'ವೆಂಕಟೇಶ, ಕಾರ್ತಿಕ್, ಸಂತೋಷ್, ಸೈಫ್, ಧನುಷ್, ಪ್ರಜ್ವಲ್ ಎಂಬವರು ಮದ್ಯಪಾನ ಮಾಡಿಕೊಂಡು ಸಿಗರೇಟ್ ಸೆದುತ್ತಿದ್ದ ಸಂಧರ್ಭದಲ್ಲಿ ಪ್ರೀತಂ, ಸನ್ವೀತ್ ಹಾಗೂ ಇತರರು ಸ್ಥಳಕ್ಕೆ ಬಂದು ಸಿಗರ್ ಲೈಟರ್ ಕೇಳಿದ್ದರು. ಪ್ರಜ್ವಲ್ ಸಿಗರ್ ಲೈಟರನ್ನು ಪ್ರೀತಂ ಹಾಗೂ ಇತರರಿಗೆ ನೀಡಿದ್ದ. ಅದನ್ನು ಅವರು ಮರಳಿಸದಿದ್ದಾಗ ಪ್ರಜ್ವಲ್ ಅವರನ್ನು ಪ್ರಶ್ನಿಸಿದ್ದ. ಆಗ ಆ ಗುಂಪಿನಲ್ಲಿದ್ದವನೊಬ್ಬ ಕಾರ್ತಿಕ್ ತಲೆಗೆ ಬೀಯರ್ ಬಾಟಲಿಯಿಂದ ಹೊಡೆದಿದ್ದ. ಆ ಬಳಿಕ ಎರಡು ಗುಂಪುಗಳಲ್ಲಿದ್ದವರು ಮರದ ಕೋಲುಗಳಿಂದ ಹೊಡೆದಾಡಿಕೊಂಡಿದ್ದಾರೆ' ಎಂದು ಪೊಲೀಸ್ ಮೂಲಗಳು ತಿಳಿಸಿವೆ.
'ವೆಂಕಟೇಶ್, ಕಾರ್ತಿಕ್, ಸಂತೋಷ್, ಸೈಫ್, ಧನುಷ್, ಪ್ರಜ್ವಲ್ ಎಂಬವರು ಸೇರಿ ಹಲ್ಲೆ ನಡೆಸಿದ್ದಾರೆ' ಎಂದು ಪ್ರೀತಂ ದೂರು ನೀಡಿದ್ದಾರೆ. ಆರೋಪಿಗಳಾದ ಕಾರ್ತಿಕ್, ಸಂತೋಷ್, ಧನುಷ್, ಪ್ರಜ್ವಲ್ ಎಂಬುವರನ್ನು ಬಂಧಿಸಲಾಗಿದೆ' ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರೀತಂ ಮತ್ತು ಸನ್ವೀತ್ ಹಾಗೂ ಇತರರು ಸೇರಿ ಹಲ್ಲೆ ನಡೆಸಿದ್ದಾರೆ ಎಂದು ಪ್ರಜ್ವಲ್ ದೂರು ನೀಡಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕಾನೂನು ಸುವ್ಯವಸ್ಥೆ ಡಿ.ಸಿ.ಪಿ ಸಿದ್ದಾರ್ಥ್ ಹಾಗೂ ಸಿಸಿಬಿ ಎಸಿಪಿ ಮನೋಜ್ ನಾಯ್ಕ್, ಉತ್ತರ ಉಪ ವಿಭಾಗದ ಎಸಿಪಿ ಶ್ರೀಕಾಂತ್ ಮತ್ತಿತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಗಣೇಶಕಟ್ಟೆಯಲ್ಲಿ ಭಾನುವಾರ ರಾತ್ರಿ ನಡೆದ ಗುಂಪು ಘರ್ಷಣೆಯ ಮಾಹಿತಿಯನ್ನು ತಿರುಚಿ ವಾಟ್ಸ್ ಆ್ಯಪ್ಗಳಲ್ಲಿ ಸುಳ್ಳು ಸುದ್ದಿ ಹರಿಯ ಬಿಡಲಾಗಿದೆ. ಬೆಂಗ್ರೆ ಪರಿಸರದಲ್ಲಿ 'ಹಿಂದೂಗಳ ಮನೆಯನ್ನು ಗುರಿಯಾಗಿಸಿಕೊಂಡು ತಲವಾರು ಹಿಡಿದು ನುಗ್ಗಿದ ಮುಸ್ಲಿಮ್ ಯುವಕರ ತಂಡದಿಂದ ಪರಿಶಿಷ್ಟ ಸಮುದಾಯದ ಯುವಕನ ಮೇಲೆ ದಾಳಿ. ಪರಾರಿ ಆಗುವ ಸಂದರ್ಭದಲ್ಲಿ ಒಬ್ಬನ ಸೆರೆ. ಸ್ಥಳದಲ್ಲಿ ಭಾರಿ ಸಂಖ್ಯೆಯಲ್ಲಿ ಸೇರಿರುವ ಹಿಂದೂಗಳು' ಎಂದು ಕಿಡಿಗೇಡಿಗಳು ಸುಳ್ಳು ಮಾಹಿತಿಯನ್ನು ಹರಿಯಬಿಟ್ಟಿದ್ದಾರೆ' ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಪು ಘರ್ಷಣೆಯ ದೃಶ್ಯಗಳನ್ನು ಹಂಚಿಕೊಂಡು ಎರಡು ಕೋಮುಗಳ ನಡುವೆ ವೈಷಮ್ಯ ಸೃಷ್ಟಿಸುವ ಸುದ್ದಿ ಹರಿಯ ಬಿಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.