ADVERTISEMENT

ಮಂಗಳೂರು | ಮೀನುಗಾರಿಕೆ ಬೋಟ್ ದುರಂತ: ಮೂರನೇ ಶವ ಪತ್ತೆ, ಮುಂದುವರಿದ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2020, 8:33 IST
Last Updated 2 ಡಿಸೆಂಬರ್ 2020, 8:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು:ಮೀನುಗಾರಿಕೆಗೆ ತೆರಳಿದ್ದ ಶ್ರೀ ರಕ್ಷ ಎಂಬ ಬೋಟು ಆಳ ಸಮುದ್ರದಲ್ಲಿ ಮುಳುಗಿ ಆರು ಜನರು ಮಂಗಳವಾರ ನಾಪತ್ತೆಯಾಗಿದ್ದು, ಈ ಪೈಕಿ ಮೂರನೇ ಮೀನುಗಾರರ ಮೃತದೇಹ ಬುಧವಾರ ಪತ್ತೆಯಾಗಿದೆ.

ನಾಪತ್ತೆಯಾದ ಇನ್ನೂ ಮೂವರು ಪತ್ತೆಯಾಗದೇ ಯಾವುದೇ ರೀತಿಯ ಮೀನುಗಾರಿಕೆ ನಡೆಸಲು ಅವಕಾಶ ಕೊಡುವುದಿಲ್ಲ ಎಂದು ಬೆಂಗರೆ ನಾಗರಿಕರು ಮಂಗಳವಾರ ರಾತ್ರಿಯಿಂದ ಶಾಂತಿಯುತ ಪ್ರತಿಭಟನೆ ನಡೆಸಿದ್ದು, ಬುಧವಾರವೂ ಮೀನುಗಾರಿಕೆ ಸ್ಥಗಿತಗೊಳಿಸಿದ್ದಾರೆ.

ನಗರದ ದಕ್ಕೆ ಮೀನು ಮಾರುಕಟ್ಟೆಯನ್ನು ಬಂದ್ ಮಾಡಲಾಗಿದ್ದು, ವಿವಿಧೆಡೆ ಹಲವರು ಮೀನು ವ್ಯಾಪಾರ - ವಹಿವಾಟನ್ನೂ ಸ್ಥಗಿತಗೊಳಿಸಿದ್ದಾರೆ.

ADVERTISEMENT

ಮೀನುಗಾರಿಕೆಗೆ ತೆರಳಿ ಇಂತಹ ಅನಾಹುತ ಸಂಭವಿಸಿದ ಸಂದರ್ಭದಲ್ಲಿ ಕರಾವಳಿ ರಕ್ಷಣಾ ಪಡೆಯಿಂದತಕ್ಷಣ ಸಹಕಾರ ಸಿಗುತ್ತಿಲ್ಲ. ಸ್ಥಳೀಯವಾಗಿ ಇತರ ಮೀನುಗಾರರು, ಮುಳುಗು ತಜ್ಞರು ತಕ್ಷಣ ಕಾರ್ಯಾಚರಣೆ ಆರಂಭಿಸಿದ್ದರು ಎಂದು ಸ್ಥಳೀಯರು ದೂರಿದ್ದಾರೆ.

ತಮ್ಮ ಜೀವದ ಹಂಗು ತೊರೆದು ‌ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುತ್ತಾರೆ. ಇಲ್ಲಿ ಮೀನುಗಾರರ ರಕ್ಷಣೆಗೆ ಯಾವುದೇ ಸೌಲಭ್ಯ ಒದಗಿಸಿದೇ ನಿರ್ಲಕ್ಷ್ಯ ವಹಿಸಲಾಗಿದೆ. ಆದುದರಿಂದ ಇಂತಹ ದುರಂತಗಳು ಸಂಭವಿಸಿದ ಸಂದರ್ಭದಲ್ಲಿ ಮೀನುಗಾರಿಕೆ ಇಲಾಖೆ ಹಾಗೂ ಮೀನುಗಾರಿಕೆ ಸಂಘದ ವತಿಯಿಂದ ಎಲ್ಲ ಸಹಕಾರ ಹಾಗೂ ಪರಿಹಾರ ನೀಡಬೇಕು ಎಂದು ಕುಟುಂಬಸ್ಥರು ಅಳಲು ತೋಡಿ ಕೊಂಡಿದ್ದಾರೆ ಎಂದು ಸ್ಥಳೀಯ ನಗರ ಪಾಲಿಕೆ ಸದಸ್ಯ ಮುನೀಬ್ ಬೆಂಗರೆ ತಿಳಿಸಿದ್ದಾರೆ.

ಕರಾವಳಿ ಕಾವಲು ಪಡೆ, ಮೀನುಗಾರಿಕೆ ಇಲಾಖೆ, ಮುಳುಗು ತಜ್ಞರು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಕಾರ್ಯಾಚರಣೆ ಮುಂದುವರಿದಿದೆ ಎಂದು ಮೀನುಗಾರರ ಮುಖಂಡ, ಕರ್ನಾಟಕ ಮೀನುಗಾರಿಕೆ ನಿಗಮದ ಅಧ್ಯಕ್ಷ ನಿತಿನ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಮುಂದುವರಿದ ಕಾರ್ಯಾಚರಣೆ: ಪತ್ತೆಯಾದ ಮೂರನೇ ಶವವನ್ನು ಬೆಂಗರೆಯ ಅನ್ಸಾರ್ ಎಂದು ಗುರುತಿಸಲಾಗಿದೆ. ಸದ್ಯ ಸಮುದ್ರದದಲ್ಲಿ 80 ಪರ್ಸೀನ್ ದೋಣಿಗಳಿಂದ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಮುಳುಗಿದ ಮೀನುಗಾರಿಕಾ ದೋಣಿಯಲ್ಲಿದ್ದ ಬಲೆಯನ್ನು ರಕ್ಷಣೆಗೆ ತೆರಳಿದ ಮೀನುಗಾರರು ಮೇಲೆತ್ತಿದ್ದಾರೆ. ರಕ್ಷಣೆಗೆ ತೆರಳಿದ ಮುಳುಗು ತಜ್ಞರಿಗೆ ತಣ್ಣೀರುಬಾವಿಯಿಂದ ಆಮ್ಲಜನಕದ ಸಿಲಿಂಡರ್ ಕಳುಹಿಸಿಕೊಡಲಾಗಿದೆ. ಕಾರ್ಯಾಚರಣೆ ನಡೆಯುತ್ತಿರುವ ಕಡಲ ತೀರದ ಮಂಗಳೂರಿನ ದಕ್ಕೆ ಬಳಿ ನೂರಾರು ಮೀನುಗಾರರ ಜಮಾಯಿಸಿದ್ದು, ಜನ ದಟ್ಟಣೆಯೂ ಹೆಚ್ಚಿದೆ. ಸ್ಥಳದಲ್ಲಿ ಹೆಚ್ಚಿನ ಪೊಲೀಸ್, ಕೆ.ಎಸ್.ಆರ್.ಪಿ ವಾಹನಗಳು ಹಾಗೂ ಹೆಚ್ಚುವರಿ ಪೊಲೀಸ್ ಅಧಿಕಾರಿಗಳ ನಿಯೋಜನೆ‌ ಮಾಡಲಾಗಿದೆ.

ಮತ್ತೆರಡು ಶವ ಪತ್ತೆ:ಬುಧವಾರ ಮಧ್ಯಾಹ್ನದ ವೇಳೆಗೆ ಮತ್ತೆರಡು ಶವಗಳು ಪತ್ತೆಯಾಗಿವೆ. ಈ ಪೈಕಿ ಒಬ್ಬರನ್ನು ಬೆಂಗರೆಯ ಅನ್ಸಾರ್ ಎಂದು ಗುರುತಿಸಲಾಗಿದೆ. ಇನ್ನೊಬ್ಬರ ಗುರುತು ಪತ್ತೆ ಕಾರ್ಯ ಮುಂದುವರಿದಿದೆ. ಮಂಗಳವಾರ ಇಬ್ಬರ ಶವ ಪತ್ತೆಯಾಗಿತ್ತು.

ಪರಿಹಾರಕ್ಕೆ ಆಗ್ರಹ

ಮೀನುಗರಿಕಾ ದೋಣಿ ದುರಂತದಲ್ಲಿ ಮೃತಪಟ್ಟ ಕುಟುಂಬಕ್ಕೆ ತಲಾ ₹25ಲಕ್ಷ ಪರಿಹಾರ ಮತ್ತು ಸಂತ್ರಸ್ತರ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ನೀಡುವಂತೆ ಬಂದರಿನಲ್ಲಿ ಬುಧವಾರ ಸಭೆ ಸೇರಿದ ಶ್ರಮಿಕರ ಸಂಘದ ಸದಸ್ಯರು ಒತ್ತಾಯಿಸಿದರು. ಮೃತರ ಕುಟುಂಬಕ್ಕೆ ಸಾಂತ್ವನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.