ಆಸ್ಪತ್ರೆ
(ಪ್ರಾತಿನಿಧಿಕ ಚಿತ್ರ)
ಮಂಗಳೂರು: ‘ದೇಹದ ಹೊರಗೆ ಕಾರ್ಯನಿರ್ವಹಿಸುವ ಮೆಂಬ್ರೇನ್ ಆಕ್ಸಿಜನೇಷನ್ (ಎಕ್ಮೊ) ಸೇವೆಯನ್ನು ನಗರದ ಅಂಬೇಡ್ಕರ್ ವೃತ್ತದ ಬಳಿಯ ಕಸ್ತೂರಬಾ ವೈದ್ಯಕೀಯ ಕಾಲೇಜಿನಲ್ಲಿ ಡಾ.ಮದನ್ಸ್ ಎಕ್ಮೊ ಹೆಲ್ತ್ ಕೇರ್ ಸಂಸ್ಥೆಯ ಸಹಯೋಗದಲ್ಲಿ 2025ರ ಜ.1ರಿಂದ ಆರಂಭಿಸಲಾಗುತ್ತಿದೆ’ ಎಂದು ಆಸ್ಪತ್ರೆಯ ಪ್ರಾದೇಶಿಕ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಗೀರ್ ಸಿದ್ಧಿಕಿ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದ ಅವರು, ‘ತುರ್ತು ಸಂದರ್ಭದಲ್ಲಿ ತ್ವರಿತವಾಗಿ ಜೀವರಕ್ಷಕ ಚಿಕಿತ್ಸೆ ಒದಗಿಸಲು ಇದು ನೆರವಾಗಲಿದೆ’ ಎಂದರು.
ಆಸ್ಪತ್ರೆಯ ಕ್ರಿಟಿಕಲ್ ಕೇರ್ ವಿಭಾಗದ ಮುಖ್ಯಸ್ಥ ಡಾ.ದತ್ತಾತ್ರೇಯ ಪ್ರಭು, ‘ಶ್ವಾಸಕೋಶ ಅಥವಾ ಹೃದಯ ವೈಫಲ್ಯದಿಂದಾಗಿ ರೋಗಿಯ ದೇಹಸ್ಥಿತಿ ಗಂಭೀರವಾದಾಗ ಸಾಂಪ್ರದಾಯಿಕ ಚಿಕಿತ್ಸೆ ಫಲಪ್ರದವಾಗದು. ಅಂತಹ ಸಂದರ್ಭದಲ್ಲಿ ಕೃತಕ ಉಸಿರಾಟದ ವ್ಯವಸ್ಥೆ ಮೂಲಕ ಅವರನ್ನು ಉಳಿಸಿಕೊಳ್ಳಲು ಎಕ್ಮೊ ಸೇವೆ ಪ್ರಯೋಜನಕಾರಿ. ನಮ್ಮ ಆಸ್ಪತ್ರೆಯಲ್ಲಿ ಹೊಸ ಎಕ್ಮೊ ಯಂತ್ರ ಲಭ್ಯವಿದ್ದು, ಗಂಭೀರ ಸ್ಥಿತಿ ತಲುಪಿದ ರೋಗಿಗಳಿಗೆ ತ್ವರಿತವಾಗಿ ಎಕ್ಮೊ ಚಿಕಿತ್ಸೆ ಆರಂಭಿಸುವ ಸೌಕರ್ಯ ಕಲ್ಪಿಸಲಾಗಿದೆ’ ಎಂದರು.
ಎಕ್ಮೊ ಹೆಲ್ತ್ ಕೇರ್ ಸಂಸ್ಥೆಯ ಡಾ.ಮದನ್, ‘ಉತ್ತರ ಕೇರಳ ಹಾಗೂ ಕರಾವಳಿ ಕರ್ನಾಟಕದ ಬೇರಾವ ಆಸ್ಪತ್ರೆಯಲ್ಲೂ ಎಕ್ಮೊ ಯಂತ್ರವಿಲ್ಲ. ಕೆಎಂಸಿ ಆಸ್ಪತ್ರೆಯ ಈ ಯಂತ್ರ ರೋಗಿಗಳ ಜೀವ ಉಳಿಸಲು ಉಪಯುಕ್ತವಾಗಲಿದೆ. ಈ ಚಿಕಿತ್ಸೆ ಸ್ವಲ್ಪ ದುಬಾರಿ. ಆರಂಭದಲ್ಲಿ ₹ 6 ಲಕ್ಷ ಮತ್ತು ದಿನವೊಂದಕ್ಕೆ ₹ 1 ಲಕ್ಷ ವೆಚ್ಚವಾಗುತ್ತದೆ. ಬೇರೆ ನಗರಗಳಲ್ಲಿನ ಎಕ್ಮೊ ಸೇವೆಗೆ ಹೋಲಿಸಿದರೆ ಈ ದರ ತೀರಾ ಕಡಿಮೆ. ಬೇಡಿಕೆ ಹೆಚ್ಚಾದಂತೆ ಚಿಕಿತ್ಸೆ ವೆಚ್ಚವೂ ಕಡಿಮೆಯಾಗಲಿದೆ. ಹಿನ್ನೆಲೆ ಗಾಯಕ ದಿ.ಎಸ್ಪಿ.ಬಾಲಸುಬ್ರಹ್ಮಣ್ಯಂ ದೇಹಸ್ಥಿತಿ ಗಂಭೀರವಾದಾಗ ಚೆನ್ನೈನ ಆಸ್ಪತ್ರೆಯಲ್ಲಿ ಅವರ ಚಿಕಿತ್ಸೆಗೆ ಎಕ್ಮೊ ಬಳಸಲಾಗಿತ್ತು’ ಎಂದರು.
ಆಸ್ಪತ್ರೆಯ ಮಾರುಕಟ್ಟೆ ವಿಭಾಗದ ರಾಕೇಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.