ADVERTISEMENT

ಧರ್ಮಸ್ಥಳ ಪ್ರಕರಣ: 13ನೇ ಸ್ಥಳದಲ್ಲಿ ಜಿಪಿಆರ್ ಬಳಸಿ ಶೋಧ ಕಾರ್ಯ ಆರಂಭ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 8:33 IST
Last Updated 12 ಆಗಸ್ಟ್ 2025, 8:33 IST
   

ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಮೃತದೇಹಗಳನ್ನು ಹೂತುಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ನೆಲದಡಿ ಮೃತದೇಹಗಳ ಅವಶೇಷ ಇದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಲು ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ (ಜಿಪಿಆರ್) ಸಾಧನವನ್ನು ಬಳಸಿ ಶೋಧ ಕಾರ್ಯವನ್ನು ಮಂಗಳವಾರ ಆರಂಭಿಸಿತು.

ಸಾಕ್ಷಿ ದೂರುದಾರ ತೋರಿಸಿದ್ದ 13ನೇ ಜಾಗದಲ್ಲಿ ಡ್ರೋನ್ ಮತ್ತು ಜಿಪಿಆರ್ ಬಳಸಿ ಸ್ಕ್ಯಾನ್ ಮಾಡಲಾಯಿತು. ರಾಡಾರ್ ಮೂಲಕ ಸಂಗ್ರಹಿಸಿರುವ ನೆಲದಡಿಯ ಚಿತ್ರಣಗಳನ್ನು ತಜ್ಞರು ವಿಶ್ಲೇಷಣೆಗೆ ಒಳಪಡಿಸುತ್ತಿದ್ದಾರೆ.

ಸಾಕ್ಷಿ ದೂರುದಾರ ಮೃತದೇಹಗಳನ್ನು ಹೂತಿರುವುದಾಗಿ ಹೇಳಿ, ಇದುವರೆಗೆ 17 ಜಾಗಗಳನ್ನು ತೋರಿಸಿದ್ದು, ಅವುಗಳಲ್ಲಿ ಎರಡು ಕಡೆ ಮಾತ್ರ ಮೃತದೇಹಗಳ ಅವಶೇಷ ಸಿಕ್ಕಿದೆ. ಆತ ತೋರಿಸಿದ 13 ನೇ ಜಾಗದಲ್ಲಿ ಜಿಪಿಆರ್ ಬಳಸಿ ಶೋಧ ಕಾರ್ಯ ನಡೆಸಿದ ವೇಳೆ ಮೃತದೇಹಗಳ ಅವಶೇಷ ಪತ್ತೆಯಾದರೆ ಮಾತ್ರ, ಈ ಜಾಗವನ್ನು ಅಗೆಯಲು ಎಸ್ಐಟಿ ನಿರ್ಧರಿಸಿದೆ.

ADVERTISEMENT

ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಅವರೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಎಸ್ಐಟಿ ಎಸ್.ಪಿ ಜಿತೇಂದ್ರ ಕುಮಾರ್ ದಯಾಮ, ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗಿಸ್ ಅವರೂ ಸ್ಥಳದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.