ಪೊಲೀಸ್
(ಸಾಂದರ್ಭಿಕ ಚಿತ್ರ)
ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಅಪರಾಧಕ್ಕೆ ಪ್ರೇರಣೆಯಾಗುವಂತೆ ಹೇಳಿಕೆ ನೀಡಿದ, ಅಶ್ಲೀಲವಾಗಿ ಮಾತನಾಡಿದ ಹಾಗೂ ದ್ವೇಷ ಹುಟ್ಟಿಸುವಂತೆ ಹೇಳಿಕೆ ನೀಡಿದ ಆರೋಪದ ಮೇಲೆ ಮೂವರ ವಿರುದ್ಧ ಬೆಳ್ತಂಗಡಿ ಠಾಣೆಯ ಪೊಲೀಸರು ಪ್ರಕರಣದ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
‘ಅಪರಾಧ ಕೃತ್ಯಗಳನ್ನು ನಡೆಸಲು ಪ್ರೇರಣೆಯಾಗುವಂತಹ, ಅಶ್ಲೀಲ ಹಾಗೂ ಸಾರ್ವಜನಿಕರಿಗೆ ಕಿರಿ ಕಿರಿಯುಂಟಾಗುವಂತೆ ಆರೋಪಿ ಗಿರೀಶ್ ಮಟ್ಟಣ್ಣನವರ್ ಮಾತನಾಡಿರುವ ವಿಡಿಯೊವನ್ನು ತಮ್ಮ ಫೇಸ್ಬುಕ್ನಲ್ಲಿ ಬುಧವಾರ (ಆ.6ರಂದು) ಪ್ರಸಾರಮಾಡಿದ್ದಾರೆ ಎಂದು ಆರೋಪಿಸಿ ಬೆಳ್ತಂಗಡಿ ನಿವಾಸಿ ಚರಣ್ ಶೆಟ್ಟಿ (32) ದೂರು ನೀಡಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ಸೆಕ್ಷನ್ 57 (ಅಪರಾಧ ನಡೆಸಲು ಪ್ರೇರಣೆ), ಸೆಕ್ಷನ್ 296 (ಅಶ್ಲೀಲ ವಿಚಾರ ಪ್ರಸಾರ) ಹಾಗೂ ಸೆಕ್ಷನ್ 190ರ (ಅಕ್ರಮ ಕೂಟ ರಚನೆ) ಅಡಿ ಪ್ರಕರಣ ದಾಖಲಾಗಿದೆ.’
‘ಪ್ರಾದೇಶಿಕವಾಗಿ ಜನರ ನಡುವೆ ವೈಮನಸ್ಸು ಉಂಟಾಗುವಂತಹ ಹಾಗೂ ಸಾರ್ವಜನಿಕರಲ್ಲಿ ಅಪಾಯದ ಭೀತಿಯನ್ನು ಸೃಷ್ಟಿಸುವಂತಹ ಹೇಳಿಕೆಗಳನ್ನು ಆರೋಪಿ ಮಹೇಶ್ ತಿಮರೋಡಿ ಅವರು ಯೂಟ್ಯೂಬ್ನಲ್ಲಿ ಗುರುವಾರ (ಆ.7ರಂದು) ಪ್ರಸಾರ ಮಾಡಿದ್ದಾರೆ’ ಎಂದು ಆರೋಪಿಸಿ ಅವರು ಮತ್ತೊಂದು ದೂರು ನೀಡಿದ್ದಾರೆ. ಬಿಎನ್ಎಸ್ ಸೆಕ್ಷನ್ 353(2)ರ (ಧರ್ಮ, ಜಾತಿ ಜನಾಂಗ ಮೊದಲಾದುವುಗಳ ಆಧಾರದಲ್ಲಿ ಜನರ ನಡುವೆ ದ್ವೇಷ ಹುಟ್ಟಿಸುವ ಹೇಳಿಕೆ ನೀಡುವುದು) ಅಡಿ ಪ್ರಕರಣ ದಾಖಲಾಗಿದೆ.’
‘ಆರೋಪಿ ಪುನೀತ್ ಕೆರೆಹಳ್ಳಿ ಅಶ್ಲೀಲವಾಗಿ ಮಾತನಾಡಿರುವ ವೀಡಿಯೊವನ್ನು ಯೂಟ್ಯೂಬ್ನಲ್ಲಿ ಪ್ರಸಾರ ಮಾಡಿದ್ದಾರೆ ಎಂದು ಆರೋಪಿಸಿ ಬೆಳ್ತಂಗಡಿ ಕಸಬಾ ಗ್ರಾಮದ ನಿವಾಸಿ ಜೆರೋಮ್ ಬರ್ಬೋಝಾ (37) ದೂರು ನೀಡಿದ್ದು, ಬಿಎನ್ಎಸ್ ಸೆಕ್ಷನ್ 296ರ ಅಡಿ ಪ್ರಕರಣ ದಾಖಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.