ADVERTISEMENT

‘ಕನಕದಾಸರ ತತ್ವ ಇಂದಿಗೂ ಪ್ರಸ್ತುತ’

ಮಂಗಳೂರು ವಿವಿಯಲ್ಲಿ ‘ಕನಕ ತತ್ವಚಿಂತನೆ’ ಪ್ರಚಾರೋಪನ್ಯಾಸ ಮಾಲಿಕೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 6:45 IST
Last Updated 29 ಜುಲೈ 2021, 6:45 IST
ಮಂಗಳೂರು ವಿಶ್ವವಿದ್ಯಾಲಯದಲ್ಲಿ ‘ಕನಕ ತತ್ವಚಿಂತನೆ’ ಪ್ರಚಾರೋಪನ್ಯಾಸ ಮಾಲಿಕೆಯನ್ನು ಕುಲಪತಿ ಪ್ರೊ. ಪಿ.ಎಸ್.ಯಡಪಡಿತ್ತಾಯ ಉದ್ಘಾಟಿಸಿದರು.
ಮಂಗಳೂರು ವಿಶ್ವವಿದ್ಯಾಲಯದಲ್ಲಿ ‘ಕನಕ ತತ್ವಚಿಂತನೆ’ ಪ್ರಚಾರೋಪನ್ಯಾಸ ಮಾಲಿಕೆಯನ್ನು ಕುಲಪತಿ ಪ್ರೊ. ಪಿ.ಎಸ್.ಯಡಪಡಿತ್ತಾಯ ಉದ್ಘಾಟಿಸಿದರು.   

ಕೊಣಾಜೆ (ಮಂಗಳಗಂಗೋತ್ರಿ): ‘ಸಮಾಜದ ಅಂಕುಡೊಂಕುಗಳನ್ನು ಎತ್ತಿತೋರಿಸಿ ಭಕ್ತಿ ಮಾರ್ಗದ ಮೂಲಕ ಸಮಸಮಾಜಕ್ಕೆ ಪಣತೊಟ್ಟವರು ಕನಕದಾಸರು. ಕನಕರ ತತ್ವ, ಚಿಂತನೆಗಳು ಇಂದಿನ ಕಾಲಕ್ಕೂ ಪ್ರಸ್ತುತವಾಗಿವೆ’ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಸ್. ಯಡಪಡಿತ್ತಾಯ ಅಭಿಪ್ರಾಯಪಟ್ಟರು.

ಮಂಗಳೂರು ವಿಶ್ವವಿದ್ಯಾಲಯದ ಕನಕದಾಸ ಸಂಶೋಧನ ಕೇಂದ್ರದ ವತಿಯಿಂದ ಇಲ್ಲಿ ಆಯೋಜಿಸಿದ್ದ ‘ಕನಕ ತತ್ವಚಿಂತನೆ’ ಪ್ರಚಾರೋಪನ್ಯಾಸ ಮಾಲಿಕೆ ಉದ್ಘಾಟಿಸಿ ಅವರು ಮಾತನಾಡಿದರು.

ಕನಕ ದಾರ್ಶನಿಕನಾಗಿ, ಸಂತನಾಗಿ, ಚಿಂತಕನಾಗಿ ಅಂದಿನ ಕಾಲಕ್ಕೆ ಮಾತ್ರವಲ್ಲ ಇಂದಿಗೂ ನಮ್ಮ ಜೊತೆ ಶಾಶ್ವತವಾಗಿ ಇದ್ದಾನೆ. ಅವರು ಸಂತ ಮಾತ್ರವಲ್ಲ ಕವಿಯೂ ಹೌದು. ಕನಕದಾಸ ಅಧ್ಯಯನ ಕೇಂದ್ರವು ಕೋವಿಡ್ ಸಂದರ್ಭದಲ್ಲಿಯೂ ಸಾಮಾಜಿಕ ಜಾಲತಾಣದ ಮೂಲಕ ಬಹಳಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮುನ್ನಡೆಯುತ್ತಿದೆ ಎಂದರು.

ADVERTISEMENT

ಉಜಿರೆ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಕುಲಸಚಿವ ಡಾ. ಬಿ.ಪಿ. ಸಂಪತ್ ಕುಮಾರ್‌ ‘ಕನಕದಾಸರ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು’ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಮಂಗಳೂರು ವಿಶ್ವವಿದ್ಯಾಲಯ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ. ಸೋಮಣ್ಣ ಹೊಂಗಳ್ಳಿ, ಮಂಗಳೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥ ಸೂರ್ಯನಾರಾಯಣ ಭಟ್ ಪಿ.ಎಸ್, ಹಿರಿಯ ಯಕ್ಷಗಾನ ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್ ಮಾತನಾಡಿದರು.

ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕ ಡಾ. ಧನಂಜಯ ಕುಂಬ್ಳೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಯಿಸುಮ ನಾವಡ ವಂದಿಸಿದರು. ಸಂಶೋಧನಾ ಸಹಾಯಕ ಆನಂದ ಕಿದೂರು ಕಾರ್ಯಕ್ರಮ ನಿರೂಪಿಸಿದರು. ಕನಕದಾಸರ ‘ರಾಮಧಾನ್ಯ ಚರಿತೆ’ ಅರ್ಥಾನುಸಂಧಾನ ಕಾರ್ಯಕ್ರಮವನ್ನು ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್ ಹಾಗೂ ಅನನ್ಯಾ ಬಳಂತಿಮೊಗರು ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.