ವಿಟ್ಲ: ‘ತಾಯಿಯಂದಿರನ್ನು ಗೌರವಿಸುವ ಸಂಸ್ಕೃತಿ ನಮ್ಮದಾಗಬೇಕು. ಯಾವುದನ್ನೂ ಅಪೇಕ್ಷೆಪಡುವ ಮನಸ್ಸು ಸಂತರಿಗೆ ಇರಬಾರದು. ಸಮರ್ಪಣಾ ಭಾವದಿಂದ ಕೆಲಸ ಮಾಡಿದಾಗ ಯಶಸ್ಸು ಖಂಡಿತ ಲಭಿಸುವುದು’ ಎಂದು ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಮಾಣಿಲ ಕ್ಷೇತ್ರದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವದ ಅಂಗವಾಗಿ ಬುಧವಾರ ನಡೆದ ಧರ್ಮ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಶ್ರೀಕ್ಷೇತ್ರ ಕಟೀಲಿನ ಆನುವಂಶಿಕ ಪ್ರಧಾನ ಅರ್ಚಕ ಕಮಲಾದೇವಿಪ್ರಸಾದ ಅಸ್ರಣ್ಣ ಆಶೀರ್ವಚನ ನೀಡಿ, ‘ತಾವು ತಮ್ಮವರೆಂಬ ಭಾವದಿಂದ ಎಲ್ಲರನ್ನು ಒಗ್ಗೂಡಿಸುವ ಶಕ್ತಿ ಮಾಣಿಲ ಶ್ರೀಗಳಿಗಿದೆ. ದೇಶ ಕಟ್ಟುವ ಕಾರ್ಯ ಧಾರ್ಮಿಕ ಕೇಂದ್ರಗಳಿಂದ ಸಾಧ್ಯ’ ಎಂದರು.
ಆಸರೆ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷೆ ಡಾ ಆಶಾ ಜ್ಯೋತಿ ರೈ ಮಾಲಾಡಿ, ಧಾರ್ಮಿಕ ನೇತಾರ ವಿಜಯಾನಂದ ಜೋಗಿ, ಬೆಂಗಳೂರಿನ ಉದ್ಯಮಿ ಲೊಕೇಶ್, ಧಾರ್ಮಿಕ ಮುಂದಾಳು ಕೈಯೂರು ನಾರಾಯಣ ಭಟ್, ಉದ್ಯಮಿ ಶ್ರಿನಿವಾಸ್ ಶೇಟ್, ಮಹಿಳಾ ಸಮಿತಿ ಅಧ್ಯಕ್ಷೆ ವನಿತಾ ಶೆಟ್ಟಿ ಉಪಸ್ಥಿತರಿದ್ದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲಕುಮಿ ತಂಡದ ಕಲಾವಿದ ಹೆಚ್ಕೆ ನಯನಾಡು ಅವರನ್ನು ಸನ್ಮಾನಿಸಲಾಯಿತು.
ಟ್ರಸ್ಟಿ ತಾರನಾಥ ಕೊಟ್ಟಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗೀತಾ ಪುರುಷೋತ್ತಮ್ ಬಳಗದವರು ಪ್ರಾರ್ಥಿಸಿದರು. ಟ್ರಸ್ಟಿ ಪುರುಷೋತ್ತಮ ಚೇಂಡ್ಲ ಬೆಂಗಳೂರು ಸ್ವಾಗತಿಸಿದರು. ಟ್ರಸ್ಟಿ ಮಂಜು ವಿಟ್ಲ ಸನ್ಮಾನ ಪತ್ರ ವಾಚಿಸಿದರು. ಟ್ರಸ್ಟಿ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ ವಂದಿಸಿದರು.
ಧಾರ್ಮಿಕ ಕಾರ್ಯಕ್ರಮ: ಬೆಳಿಗ್ಗೆ ಚಂಡಿಕಾಯಾಗ, ವಿಠಲಯಾಗ, ಮಧ್ಯಾಹ್ನ ಪೂರ್ಣಾಹುತಿ, ಪ್ರತಿಷ್ಠಾವರ್ಧಂತ್ಯುತ್ಸವ, ಪ್ರಸನ್ನ ಮಹಾಪೂಜೆ, ಮಂತ್ರಾಕ್ಷತೆ ನಡೆದು, ಅನ್ನಸಂತರ್ಪಣೆ ನಡೆಯಿತು. ರಾತ್ರಿ ದುರ್ಗಾನಮಸ್ಕಾರ ಪೂಜೆ, ಮಹಾಪೂಜೆ ನಡೆಯಿತು. ಬಳಿಕ ಕಟೀಲು ದಶಾವತಾರ ಯಕ್ಷಗಾನ ಮಂಡಳಿಯವರಿಂದ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.