ADVERTISEMENT

ಹಾನಿ ಆಗದಂತೆ ಕಾಮಗಾರಿ ನಿರ್ವಹಿಸಿ

ಗೇಲ್‌ ಸಂಸ್ಥೆ ಅಧಿಕಾರಿಗಳ ಜೊತೆ ಮೇಯರ್‌ ಸಭೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2021, 2:06 IST
Last Updated 24 ಡಿಸೆಂಬರ್ 2021, 2:06 IST
ಗೇಲ್‌ ಕಂಪನಿಯ ಅಧಿಕಾರಿಗಳ ಜೊತೆಗೆ ಮೇಯರ್‌ ಪ್ರೇಮಾನಂದ ಶೆಟ್ಟಿ ಗುರುವಾರ ಸಭೆ ನಡೆಸಿದರು.
ಗೇಲ್‌ ಕಂಪನಿಯ ಅಧಿಕಾರಿಗಳ ಜೊತೆಗೆ ಮೇಯರ್‌ ಪ್ರೇಮಾನಂದ ಶೆಟ್ಟಿ ಗುರುವಾರ ಸಭೆ ನಡೆಸಿದರು.   

ಮಂಗಳೂರು: ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಗೇಲ್‌ ಸಂಸ್ಥೆಯವರು ಮನೆ ಮನೆಗೆ ಇಂಧನ ಪೂರೈಸುವ ಕಾಮಗಾರಿ ಕೈಗೊಂಡಿದ್ದು, ನಗರದಲ್ಲಿ ಹಲವೆಡೆ ನಲ್ಲಿ ನೀರಿನ ಕೊಳವೆಗಳಿಗೆ ಹಾನಿ ಆಗುತ್ತಿರುವ ಬಗ್ಗೆ ಸಾರ್ವನಿಕರಿಂದ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಮೇಯರ್ ಪ್ರೇಮಾನಂದ ಶೆಟ್ಟಿ ಅಧ್ಯಕ್ಷತೆಯಲ್ಲಿ ಸಂಸ್ಥೆಯ ಮುಖ್ಯಸ್ಥರು ಹಾಗೂ ಗುತ್ತಿಗೆದಾರರನ್ನು ಒಳಗೊಂಡ ಸಭೆಯನ್ನು ಪಾಲಿಕೆಯ ಸಮಿತಿ ಸಭಾಂಗಣದಲ್ಲಿ ಗುರುವಾರ ನಡೆಯಿತು.

ಗೇಲ್‌ ಸಂಸ್ಥೆಯವರು ಕಾಮಗಾರಿಗಳ ವಿವರಗಳನ್ನು ಪಾಲಿಕೆಗೆ ನೀಡುವಂತೆ ಮತ್ತು ಯಾವ ಪ್ರದೇಶದಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂಬುದನ್ನು ಮೊದಲೇ ಪಾಲಿಕೆಯ ಸಂಬಂಧಿಸಿದ ವಿಭಾಗಕ್ಕೆ ಮಾಹಿತಿ ನೀಡುವಂತೆ ಸೂಚಿಸಲಾಯಿತು. ಗೇಲ್‌ ಸಂಸ್ಥೆಯ ಆಯಾ ಕಾಮಗಾರಿಗೆ ಸಂಬಂಧಪಟ್ಟಂತೆ ಎಂಜಿನಿಯರ್‌ಗಳು ಮಾಹಿತಿ ನೀಡುವಂತೆ ಸಂಬಂಧಿತ ಅಧಿಕಾರಿಗಳಿಗೆ ಮೇಯರ್ ಸೂಚಿಸಿದರು. ಕಾಮಗಾರಿ ಮಾಡುವಾಗ ರಸ್ತೆ ಅಗೆತ ಮಾಡಿದರೆ, ಅದನ್ನು ಸರಿಪಡಿಸಿ ಮೊದಲಿನಂತೆ ಮಾಡಲು ಆದೇಶಿಸಿದರು.

ನಗರದಲ್ಲಿ ಕಾಮಗಾರಿ ನಡೆಸುವಾಗ ಸಾರ್ವನಿಕರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು. ಈ ನಿಟ್ಟಿನಲ್ಲಿ ಕಾಮಗಾರಿ ನಿರ್ವಹಿಸುವ ಎಲ್ಲ ಸಂಸ್ಥೆಗಳು ಗಮನ ಹರಿಸಬೇಕು ಎಂದು ಸೂಚಿಸಿದರು.

ADVERTISEMENT

ಉಪ ಮೇಯರ್ ಸುಮಂಗಲಾ ರಾವ್, ಆಯುಕ್ತ ಅಕ್ಷಯ್ ಶ್ರೀಧರ್, ಸಚೇತಕ ಸುಧೀರ್ ಶೆಟ್ಟಿ, ಪಾಲಿಕೆ ಸದಸ್ಯರಾದ ಭಾಸ್ಕರ್ , ಶಶಿಧರ್ ಹೆಗ್ಡೆ, ದಿವಾಕರ್, ನವೀನ್ ಡಿಸೋಜ, ಜಯನಂದನ್ ಅಂಚನ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಲೋಕೇಶ್ ಬೊಳ್ಳಾಜೆ, ಲೀಲಾವತಿ ಪ್ರಕಾಶ್ ಮತ್ತು ಶೋಭಾ ರಾಜೇಶ್ ಉಪಸ್ಥಿತರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.