ಮಂಗಳೂರು: ಕರಾವಳಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸದ್ಯಕ್ಕೆ ವೈದ್ಯಕೀಯ ಆಮ್ಲಜನಕದ ಕೊರತೆ ಎದುರಾಗಿಲ್ಲ. ಮುಂಜಾಗ್ರತಾ ಕ್ರಮವಾಗಿ ಸರ್ಕಾರಿ ಹಾಗೂ ಖಾಸಗಿ ಕಂಪನಿಗಳ ಸಹಭಾಗಿತ್ವದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕ ನಿರ್ಮಾಣಕ್ಕೆ ಕಾರ್ಯಾದೇಶ ನೀಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗ ಪ್ರತಿದಿನ 8 ಟನ್ ಆಮ್ಲಜನಕ ಅಗತ್ಯವಿದೆ. ಸದ್ಯ 6.5 ಟನ್ ಸರಬರಾಜು ಇದೆ. ಜಿಲ್ಲೆಯ ವೆನ್ಲಾಕ್ ಆಸ್ಪತ್ರೆ ಮತ್ತು 8 ಖಾಸಗಿ ಆಸ್ಪತ್ರೆಗಳು 15 ದಿನಗಳಿಗೆ ಆಗುವಷ್ಟು ಆಮ್ಲಜನಕ ಸಂಗ್ರಹದವ್ಯವಸ್ಥೆಯನ್ನು ಹೊಂದಿವೆ.
ಬಳ್ಳಾರಿಯಿಂದ ದ್ರವೀಕೃತ ಆಮ್ಲಜನಕ: ಚಿಕ್ಕಮಗಳೂರು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ನಿತ್ಯ ಸರಾಸರಿ 1.5 ಸಾವಿರದಿಂದ 1.8 ಸಾವಿರ ಲೀಟರ್ ಆಕ್ಸಿಜನ್ ಬಳಕೆಯಾಗುತ್ತಿದೆ. ಈವರೆಗೆ ಆಮ್ಲಜನಕದ ಕೊರತೆ ಉಂಟಾಗಿಲ್ಲ.
ಉಡುಪಿ–ಬೇಡಿಕೆಯಷ್ಟು ಪೂರೈಕೆ: ಉಡುಪಿ ಜಿಲ್ಲೆಗೆ ನಿತ್ಯ 5 ರಿಂದ 6 ಸಾವಿರ ಕಿಲೋಲೀಟರ್ ಆಮ್ಲಜನಕ ಅಗತ್ಯವಿದ್ದು, ಬೇಡಿಕೆಯಷ್ಟು ಆಮ್ಲಜನಕ ಪೂರೈಕೆ ಇದೆ. ಮೂರು ಕಡೆ 51ಸಾವಿರ ಲೀಟರ್ ಸಾಮರ್ಥ್ಯದ ಆಮ್ಲಜನಕ ಸಂಗ್ರಹಣಾ ಘಟಕಗಳಿವೆ. ಜಿಲ್ಲಾ ಆಸ್ಪತ್ರೆಯಲ್ಲಿ 6ಸಾವಿರ ಕಿ.ಲೀ, ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ 20ಸಾವಿರ ಕಿ.ಲೀ ಹಾಗೂ ಕಾಪು ತಾಲ್ಲೂಕಿನ ಬೆಳಪುವಿನಲ್ಲಿ 25ಸಾವಿರ ಕಿ.ಲೀ ಸಾಮರ್ಥ್ಯದ ಆಮ್ಲಜನಕ ಸಂಗ್ರಹಣಾ ಸ್ಥಾವರಗಳು ಇವೆ. ಆದರೆ, ಜಿಲ್ಲೆಯಲ್ಲಿ ಉತ್ಪಾದನಾ ಘಟಕಗಳಿಲ್ಲ.
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕೊರತೆ ಕಾಡಬಹುದು ಎಂಬ ಆತಂಕವಿದೆ.
ಎಂಆರ್ಪಿಎಲ್ನಿಂದ ರಾಜ್ಯದಲ್ಲಿ 5 ಘಟಕ:‘ಎಂಆರ್ಪಿಎಲ್ ಕಂಪನಿಯ ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ಸೇರಿದಂತೆ ರಾಜ್ಯದ 5 ಕಡೆ ಆಮ್ಲಜನಕ ಉತ್ಪಾದನಾ ಘಟಕಗಳ ಸ್ಥಾಪನೆ ಮಾಡಲಿದೆ. ₹1.12 ಕೋಟಿ ವೆಚ್ಚದಲ್ಲಿ ವೆನ್ಲಾಕ್ನಲ್ಲಿ 930 ಎಲ್ಪಿಎಂ ಸಾಮರ್ಥ್ಯದ ಘಟಕ ಆರಂಭಿಸಲು ಈಗಾಗಲೇ ಕಾರ್ಯಾದೇಶ ನೀಡಲಾಗಿದೆ’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಎಂ. ವೆಂಕಟೇಶ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.