ಮಂಗಳೂರು: ಏಪ್ರಿಲ್ನಿಂದ ಜೂನ್ 14 ರವರೆಗೆ ಭಾರಿ ಗಾಳಿ– ಮಳೆಯಿಂದಾಗಿ ಮೆಸ್ಕಾಂಗೆ ಒಟ್ಟು ₹13.67 ಕೋಟಿ ನಷ್ಟ ಉಂಟಾಗಿದೆ.
ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ವ್ಯಾಪ್ತಿಯಲ್ಲಿ ಒಟ್ಟು 7,075 ವಿದ್ಯುತ್ ಕಂಬಗಳು ಹಾನಿಗೊಳಗಾಗಿದ್ದು, ₹5.86 ಕೋಟಿ ನಷ್ಟವಾಗಿದೆ. 680 ಪರಿವರ್ತಕಗಳಿಗೆ ಹಾನಿಯಾಗಿದ್ದು, ₹6.56 ಕೋಟಿ ನಷ್ಟವಾಗಿದೆ. 219.80 ಕಿ.ಮೀ. ಉದ್ದದ ವಿದ್ಯುತ್ ಮಾರ್ಗಕ್ಕೆ ಹಾನಿಯಾಗಿದ್ದು, ₹1.24 ಕೋಟಿ ಹಾನಿಯಾಗಿದೆ. ಕಂಪನಿ ವ್ಯಾಪ್ತಿಯಲ್ಲಿ ಒಟ್ಟು ಹಾನಿಯ ಮೊತ್ತ 13.67 ಕೋಟಿ ನಷ್ಟವಾಗಿದೆ.
ಹಾನಿಯಾದ ವಿದ್ಯುತ್ ಮಾರ್ಗಗಳನ್ನು ಸಮರೋಪಾದಿಯಲ್ಲಿ ದುರಸ್ತಿ ಮಾಡಿ, ನಿರಂತರ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ದುರಸ್ತಿಗೆ ಬೇಕಾಗುವ ಕಂಬ, ಪರಿವರ್ತಕಗಳು, ವಿದ್ಯುತ್ ತಂತಿ ಮತ್ತಿತರ ಸಾಮಗ್ರಿಗಳು ದಾಸ್ತಾನಿದ್ದು, ಯಾವುದೇ ಕೊರತೆ ಉಂಟಾಗಿಲ್ಲ ಎಂದು ಮೆಸ್ಕಾಂ ತಿಳಿಸಿದೆ.
ದಕ್ಷಿಣ ಕನ್ನಡಕ್ಕೆ 19, ಉಡುಪಿಗೆ 7, ಶಿವಮೊಗ್ಗ ಜಿಲ್ಲೆಯಲ್ಲಿ 10, ಚಿಕ್ಕಮಗಳೂರು ಜಿಲ್ಲೆಯಲ್ಲಿ 10 ವಾಹನಗಳನ್ನು ಒಟ್ಟು 46 ಸಂಖ್ಯೆಯ ಹೆಚ್ಚುವರಿ ವಾಹನಗಳನ್ನು ಮಂಜೂರು ಮಾಡಲಾಗಿದೆ.
ಮೆಸ್ಕಾಂ ವ್ಯಾಪ್ತಿಯ ನಾಲ್ಕು ಜಿಲ್ಲೆಗಳು ಬೆಟ್ಟಗುಡ್ಡ, ಕಾಡು, ನದಿ ಹಾಗೂ ದುರ್ಗಮ ಪ್ರದೇಶಗಳನ್ನು ಒಳಗೊಂಡಿದ್ದು, ಸಾಮಗ್ರಿಗಳ ಸಾಗಾಟ, ನದಿ ದಾಟುವಿಕೆ, ವಾಹನ ಸಂಚಾರ ದುಸ್ತರ ಮುಂತಾದ ಸಂದರ್ಭಗಳಲ್ಲಿ ಕೆಟ್ಟು ಹೋದ ವಿದ್ಯುತ್ ಮಾರ್ಗಗಳ ಪುನರ್ರಚನೆ ಮತ್ತು ವಿದ್ಯುತ್ ಸಂಪರ್ಕ ಸಹಜವಾಗಿಯೇ ವಿಳಂಬವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಗ್ರಾಹಕರು ಮೆಸ್ಕಾಂನೊಂದಿಗೆ ಸಹಕರಿಸುವಂತೆ ಕೋರಲಾಗಿದೆ ಎಂದು ಮೆಸ್ಕಾಂ ಮನವಿ ಮಾಡಿದೆ.
‘ಮಳೆಗಾಲಕ್ಕೆ ವಿಶೇಷ ಪಡೆ’
ಮಳೆಗಾಲದಲ್ಲಿ ಉಂಟಾಗುವ ಅನಿರೀಕ್ಷಿತ ಹಾನಿಗಳನ್ನು ಎದುರಿಸಲು ಮೆಸ್ಕಾಂ ಸನ್ನದ್ಧವಾಗಿದ್ದು, ಈಗಾಗಲೇ ಒಟ್ಟು 585 ಸಿಬ್ಬಂದಿ ಒಳಗೊಂಡ ವಿಶೇಷ ಪಡೆಯನ್ನು ಮೂರು ತಿಂಗಳ ಅವಧಿಗೆ ಹೆಚ್ಚುವರಿಯಾಗಿ ಮಂಜೂರು ಮಾಡಲಾಗಿದೆ. ದಕ್ಷಿಣ ಕನ್ನಡಕ್ಕೆ 176, ಉಡುಪಿಗೆ 117, ಶಿವಮೊಗ್ಗಕ್ಕೆ142, ಚಿಕ್ಕಮಗಳೂರು ಜಿಲ್ಲೆಯಲ್ಲಿ 150 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.