ಸುಳ್ಯ: ‘ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಸರ್ವರಿಗೆ ಶಿಕ್ಷಣ ನೀಡಿದ ಡಾ. ಕುರುಂಜಿ ವೆಂಕಟ್ರಮಣ ಗೌಡರು ಇಲ್ಲಿನ ಜನರ ಪ್ರಾತಃಸ್ಮರಣೀಯರು ಎಂದು ನೆನಸಿದವರು ಕೇಂದ್ರ ವಾಣಿಜ್ಯ ಮತ್ತು ವಿಮಾನಯಾನ ಸಚಿವ ಸುರೇಶ್ ಪ್ರಭು.
ಅವರು ಮಂಗಳವಾರ ಸುಳ್ಯ ಖಾಸಗಿ ಬಸ್ ನಿಲ್ದಾಣ ಬಳಿ ದಿ.ಡಾ.ಕುರುಂಜಿ ವೆಂಕಟ್ರಮಣ ಗೌಡ ಸ್ಮಾರಕ ನಿರ್ಮಾಣ ಸಮಿತಿ ವತಿಯಿಂದ ನಿರ್ಮಾಣಗೊಂಡಿರುವ ಡಾ. ಕುರುಂಜಿ ವೆಂಕಟ್ರಮಣ ಗೌಡರ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದರು.
ಶಿಕ್ಷಣದ ಮೂಲಕ ಮಾತ್ರ ಬದಲಾವಣೆ ಸಾಧ್ಯ ಎಂದು ತೋರಿಸಿಕೊಟ್ಟವರಲ್ಲಿ ದೇಶವೇ ನೆನಪಿಸುವ ವ್ಯಕ್ತಿಗಳಲ್ಲಿ ಡಾ.ಕುರುಂಜಿ ಕೂಡಾ ಒಬ್ಬರು. ದೇಶದ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಇಲ್ಲಿಗೆ ಬಂದಿದ್ದಾರೆ. ಸಮಾಜದ ಅಭ್ಯದಯಕ್ಕೆ ಈ ರೀತಿ ಕೆಲಸ ಆಗಬೇಕು ಎಂದು ಹೇಳಿದ ಸಚಿವ ಸುರೇಶ್ ಪ್ರಭು ಅವರು ಶಿಕ್ಷಣ ನಮ್ಮ ದೇಶದಲ್ಲಿ ಇನ್ನೂ ಕ್ರಾಂತಿಯಾಗಿ ಮುಂದುವರಿಯಬೇಕು. ದೇಶದ ಎಲ್ಲಾ ಕಡೆ ಶಿಕ್ಷಣ ದೊರಕಬೇಕು ಎನ್ನುವ ನಿಟ್ಟಿನಲ್ಲಿ ಕೇಂದ್ರ ಯೋಜನೆ ರೂಪಿಸಿದೆ ಎಂದರು.
ಮುಖ್ಯಅತಿಥಿ ಸಂಸದ ನಳಿನ್ಕುಮಾರ್ ಕಟೀಲ್ ಮಾತನಾಡಿ, ದೇಶಕ್ಕೆ ನಕ್ಷತ್ರದಂತೆ ಮಿನುಗುವ ಸಾಧಕರಲ್ಲಿ ಡಾ.ಕುರುಂಜಿಯವರು ಒಬ್ಬರು. ಕುಗ್ರಾಮವಾಗಿದ್ದ ಸುಳ್ಯವನ್ನು ಇಡೀ ದೇಶ ಗುರುತಿಸುವಂತೆ ಮಾಡಿರುವ ಕೀರ್ತಿ ಅವರದ್ದು ಎಂದರು.ಶಾಸ
ಕ ಎಸ್.ಅಂಗಾರ ಅಧ್ಯಕ್ಷತೆ ವಹಿಸಿದರು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಚಿದಾನಂದ, ಪ್ರಧಾನ ಕಾರ್ಯದರ್ಶಿ ಡಾ.ರೇಣುಕಾಪ್ರಸಾದ್, ಸ್ಮಾರಕ ನಿರ್ಮಾಣ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ್ ಮಡ್ತಿಲ, ಸುಳ್ಯ ಎಪಿಎಂಸಿ ಅಧ್ಯಕ್ಷ ದೇರಣ್ಣ ಗೌಡ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚನಿಯ ಕಲ್ತಡ್ಕ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶೀಲಾವತಿ ಮಾಧವ ವೇದಿಕೆಯಲ್ಲಿದ್ದರು.
ಸುಳ್ಯ ಸಿ.ಎ.ಬ್ಯಾಂಕ್ ಅಧ್ಯಕ್ಷ ಶುಭೋದ್ ಶೆಟ್ಟಿ ಮೇನಾಲ ವಂದಿಸಿದರು. ಮೆಡಿಕಲ್ ಕಾಲೇಜಿನ ಸ್ತ್ರೀರೋಗ ತಜ್ಞೆ ಡಾ.ಗೀತಾದೊಪ್ಪ ಮತ್ತು ಉಪನ್ಯಾಸಕಿ ಬೇಬಿವಿದ್ಯಾ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.