ಸುರತ್ಕಲ್: ಕುಳಾಯಿ ಬಳಿ ನಿರ್ಮಾಣವಾಗುತ್ತಿರುವ ಕಿರು ಜೆಟ್ಟಿ ಕಾಮಗಾರಿಯ ಸ್ಥಳಕ್ಕೆ ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಅವರು ಶಾಸಕ ಡಾ.ವೈ.ಭರತ್ ಶೆಟ್ಟಿ ಅವರೊಂದಿಗೆ ಶನಿವಾರದಂದು ಭೇಟಿ ನೀಡಿ ಪರಿಶೀಲಿಸಿದರು.
ಭರತ್ ಶೆಟ್ಟಿ ಅವರು ಕಾಮಗಾರಿಯ ಕುರಿತು ಮಾಹಿತಿ ನೀಡಿ ನಾಡದೋಣಿ ಮೀನುಗಾರಿಕೆಗೂ ಅನುಕೂಲವಾಗುವಂತೆ ಜೆಟ್ಟಿ ನಿರ್ಮಾಣವಾಗಬೇಕು ಎಂದು ಮನವಿ ಮಾಡಿದರು.
‘ಇಲ್ಲಿ ಸರ್ವಋತು ಬಂದರು, ನಾಡದೋಣಿಗೂ ಪ್ರಾಶಸ್ತ್ಯ ಸಿಗುವಂತೆ ಇಲ್ಲಿನ ಬ್ರೇಕ್ ವಾಟರ್ ನಿರ್ಮಾಣವಾಗಬೇಕಿದೆ. ಈಗಿನ ಬ್ರೇಕ್ ವಾಟರ್ನಿಂದ ಸುರಕ್ಷಿತ ಮೀನುಗಾರಿಕೆ ಸಾಧ್ಯವಿಲ್ಲ. ಪ್ರಸ್ತುತ ಇರುವ ಉತ್ತರದ ಬ್ರೇಕ್ ವಾಟರ್ನ ಉದ್ದವನ್ನು 1081 ಮೀಟರ್ಗೆ ನಿಗದಿಪಡಿಸಿ ದಕ್ಷಿಣದ ಬ್ರೇಕ್ ವಾಟರ್ ಅನ್ನು 981 ಮೀಟರ್ಗೆ ವಿಸ್ತರಿಸಿ ವಿನ್ಯಾಸವನ್ನು ಪರಿಷ್ಕರಿಸಬೇಕು ಎಂಬ ಬೇಡಿಕೆಯಿದೆ. ಈ ಬಗ್ಗೆ ಮೀನುಗಾರರ ಪ್ರತಿನಿಧಿಗಳು, ಅಧಿಕಾರಿಗಳು, ಜನಪ್ರತಿನಿಧಿಗಳ ಸಭೆ ಕರೆದು ನಿರ್ಧಾರಕ್ಕೆ ಬಂದ ಬಳಿಕ ಕಾಮಗಾರಿ ಮುಂದುವರಿಸಲಾಗುವುದು’ ಎಂದರು.
ನವಮಂಗಳೂರು ಬಂದರು ಅಧಿಕಾರಿಗಳಿಂದ ಕಾಮಗಾರಿಯ ಕುರಿತು ವರದಿ ಪಡೆದರು. ಮೀನುಗಾರರ ಅಹವಾಲು ಆಲಿಸಿದರು.
ಪ್ರಮುಖರಾದ ವೇದಾವತಿ, ಸುಮಿತ್ರಾ ಕೆ., ನಯನ ಆರ್.ಕೋಟ್ಯಾನ್, ಅಶ್ವತ್ಥ್ ಕಾಂಚನ್, ರಾಜೇಶ್ ಸಾಲ್ಯಾನ್ ಬೈಕಂಪಾಡಿ, ಚಂದ್ರಶೇಖರ್ ಗುಡ್ಡೆಕೊಪ್ಲ, ಸುಧೀರ್ ಶ್ರೀಯಾನ್, ಮಾಧವ ಸುವರ್ಣ, ಪುರುಷೋತ್ತಮ ಚಿತ್ರಾಪುರ, ಕುಮಾರ್ ಮೆಂಡನ್, ರವಿ ಶ್ರೀಯಾನ್, ವಿಜಯ್ ಅರಾನಾ, ಗೋವರ್ಧನ್ ಶೆಟ್ಟಿಗಾರ್, ಶ್ರೀಕಾಂತ್ ಜತೆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.